ಸೆಪ್ಟೆಂಬರ್ 22 ರಿಂದ ಅಕ್ಟೋಬರ್, 02 ರವರೆಗೆ 2025 ನೇ ಸಾಲಿನ ದಸರಾ ಉತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಕಡೆಗಳಿಂದ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರು/ ಸಾರ್ವಜನಿಕರು ಜಿಲ್ಲೆಗೆ ಆಗಮಿಸಲಿದ್ದಾರೆ.
ಪ್ರವಾಸಿಗರು ತಂಗುವ ಹೋಂ-ಸ್ಟೇ/ ರೆಸಾರ್ಟ್/ ಹೋಟೆಲ್-ಲಾಡ್ಜ್ ಗಳಲ್ಲಿ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರೆಸಾರ್ಟ್/ ಹೋಟೆಲ್/ ಹೊಂ-ಸ್ಟೇ ಮಾಲೀಕರಿಗೆ ಸೂಚಿಸುವಂತೆ ಉಲ್ಲೇಖಿತ ಸಭೆಯಲ್ಲಿ ತಿರ್ಮಾನಿಸಲಾಗಿದೆ. ಅದರಂತೆ ಜಿಲ್ಲೆಯ ಎಲ್ಲ ರೆಸಾರ್ಟ್/ ಹೋಟೆಲ್/ ಹೋಂ-ಸ್ಟೇ ಮಾಲೀಕರು ಕ್ರಮವಹಿಸುವುದು.
ಅತಿಥಿಗಳು ಬಂದಾಗ ರಿಜಿಸ್ಟರ್ ಪುಸ್ತಕದಲ್ಲ್ಲಿ ಆಗಮಿಸಿರುವ ಎಲ್ಲ ಪ್ರವಾಸಿಗರ ಹೆಸರು, ಆಧಾರ್ ಕಾರ್ಡ್, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಾಹನ ಸಂಖ್ಯೆ ಪಡೆಯುವುದು ಹಾಗೂ ವಿದೇಶಿಯರು ಬಂದಾಗ ಅವರ ವೀಸಾ ಪಾಸ್ ಪೋರ್ಟ್/ ವಿಮಾನ ಟಿಕೆಟ್ ಪರಿಶೀಲಿಸಿ ರಿಜಿಸ್ಟರ್ನಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಮಾರ್ಗ ನಕ್ಷೆಯನ್ನು ತಿಳಿಸುವುದು ಪ್ರವಾಸಿ ತಾಣಗಳು ತೆರೆಯುವ ಹಾಗೂ ಮುಚ್ಚುವ ವೇಳೆಯನ್ನು ಪ್ರವಾಸಿಗರಿಗೆ ತಿಳಿಸುವುದು.
ಕಡ್ಡಾಯವಾಗಿ ಮಾಲೀಕರು ಸದರಿ ಕಟ್ಟಡದಲ್ಲಿ ವಾಸವಿರತಕ್ಕದ್ದು ಹಾಗೂ ಪ್ರವಾಸಿಗರ ಜೊತೆ ಅವರ ಪ್ರವಾಸ ಕುರಿತು ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಹಾಗೂ ಸ್ಥಳೀಯ ಪದ್ಧತಿಗಳು ಮತ್ತು ಕಾನೂನುಗಳ ಬಗ್ಗೆ ತಿಳಿಸುವುದು. ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರು ತೆರಳದಂತೆ ಎಚ್ಚರಿಕೆ ವಹಿಸುವುದು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಬೆಂಕಿ ನಂದಕವನ್ನು ಕಡ್ಡಾಯವಾಗಿ ಅಳವಡಿಸುವುದು.ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವುದು, ಸಿ.ಸಿ ಟಿವಿಯ 45 ದಿನಗಳ ಫೂಟೇಜ್ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಹಾಗೂ ಸಿಸಿ ಟಿವಿಯನ್ನು ಸರಿಯಾಗಿ ನಿರ್ವಹಿಸುವುದು. ಹಾಗೂ “ನೀವು ಸಿಸಿಟಿವಿ ಕಣ್ಗಾವಲಿನಲ್ಲಿರುತ್ತೀರಿ” ಎಂಬ ಫಲಕವನ್ನು ಕಡ್ಡಾಯವಾಗಿ ಅಳವಡಿಸುವುದು.
ಯಾವುದೇ ಅಹಿತಕರ ಘಟನೆ ಅಥವಾ ತಪ್ಪುಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ ಸರ್ಕಾರದ ಗಮನಕ್ಕೆ ತರತಕ್ಕದ್ದು, ಇಲ್ಲವಾದಲ್ಲಿ ಮಾಲೀಕರನ್ನೇ ಜವಾಬ್ದಾರರನ್ನಾಗಿ ಮಾಡಿ ಕಾನೂನು ಕ್ರಮಕೈಗೊಳ್ಳುವುದು. ಯಾವುದೇ ಮಾದಕ ವಸ್ತುಗಳು ಹಾಗೂ ಮದ್ಯಪಾನ ಇತ್ಯಾದಿಗಳಿಗೆ ಅವಕಾಶ ನೀಡದಂತೆ ಕ್ರಮವಹಿಸುವುದು.
ಅಕ್ಟೋಬರ್ 1 ರಂದು ಸಂಜೆ 6 ರಿಂದ ಅಕ್ಟೋಬರ್ 3 ರ ಮುಂಜಾನೆ 6 ರ ತನಕ ದಸರಾ ಹಾಗೂ ಗಾಂಧಿ ಜಯಂತಿ ಇರುವ ಹಿನ್ನೆಲೆಯಲ್ಲಿ ಎಲ್ಲ ಮದ್ಯ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಈ ಕಾರಣ ಯಾವುದೇ ಮದ್ಯದ ಬಾಟಲ್ಗಳನ್ನು ಹಾಗೂ ಯಾವುದೇ ರೀತಿಯ ಮಾದಕ ವಸ್ತುಗಳನ್ನು ಸಂಗ್ರಹಣೆ/ಬಳಕೆ/ಮಾರಾಟ ಮಾಡುವಂತಿಲ್ಲ. ಹಾಗೂ ಮದ್ಯಪಾನ ಮಾಡಿ ಬಂದ/ ಸಂಗ್ರಹಣೆ ಮಾಡಿಕೊಂಡ ಬಂದಂತಹ ಪ್ರವಾಸಿಗರಿಗೆ ಕೊಠಡಿಗಳನ್ನು ನೀಡಲು ನಿರಾಕರಿಸುವುದು.
ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅವರ ಪರವಾನಿಗೆ ರದ್ದುಗೊಳಿಸಲಾಗುವುದು ಹಾಗೂ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಡ್ಡಾಯವಾಗಿ ಒಣತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳ ಸಂಗ್ರಹಣೆಗೆ ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಡುವುದು. ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ 2 ಲೀಟರ್ಗಳಿಗಿಂತ ಕಡಿಮೆ ಪ್ರಮಾಣದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಿದ್ದು, ಅದರಂತೆ ಸೂಕ್ತ ಕ್ರಮ ವಹಿಸುವುದು. ದಯವಿಟ್ಟು ಯಾವುದೇ ಪ್ರವಾಸಿಗರು ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಲು ಪ್ರೋತ್ಸಾಹಿಸಬಾರದು.
ತುರ್ತು ಸಮಯದಲ್ಲಿ 24×7 ಕಾರ್ಯನಿರ್ವಹಿಸುವ ಜಿಲ್ಲಾಧಿಕಾರಿ ಅವರ ಕಚೇರಿ ಸಹಾಯವಾಣಿ ಸಂಖ್ಯೆ 08272-221077, 08272-221099, ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ: 9480804900, 08272-228330 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಬಿ.ಬಸಪ್ಪ ಅವರು ತಿಳಿಸಿದ್ದಾರೆ.