ಶ್ರೀ ಕ್ಷೇತ್ರ ತಿರುಪತಿ ತಿರುಮಲದಲ್ಲಿ ಸೆ. 24 ರಿಂದ 10 ದಿನಗಳ ಕಾಲ ವಿಜೃಂಭಣೆಯಿಂದ ಬ್ರಹ್ಮೋತ್ಸವ ನಡೆಯಲಿದೆ. ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅನುಕೂಲ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೆ. 24ರಂದು ತಿರುಪತಿ ತಿಮ್ಮಪ್ಪನಿಗೆ ವಸ್ತ್ರ ಸಮರ್ಪಣೆ ಮಾಡುವ ಮೂಲಕ ಬ್ರಹ್ಮೋತ್ಸವಕ್ಕೆ ಚಾಲನೆ ಸಿಗಲಿದೆ. ಪ್ರತಿದಿನ 1.16 ಲಕ್ಷ ಜನರಿಗೆ ಆನ್ಲೈನ್ ಮೂಲಕ ದರ್ಶನದ ಟಿಕೆಟ್ ನೀಡಲಾಗುವುದು. 25000 ಆಫ್ ಲೈನ್ ಟಿಕೆಟ್ ವಿತರಿಸಲಾಗುವುದು. ಬ್ರಹ್ಮೋತ್ಸವದ ಸಂದರ್ಭದಲ್ಲಿ ವಿಐಪಿ ದರ್ಶನ, ವಿಶೇಷ ದರ್ಶನ, ವಿಶೇಷ ಸೇವೆಗಳು ಇರುವುದಿಲ್ಲ.
ಪ್ರತಿ ದಿನ 8 ಲಕ್ಷ ಲಡ್ಡುಗಳನ್ನು ತಯಾರಿಸಲಾಗುವುದು. ವಸತಿಗಾಗಿ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಮೂರೂವರೆ ಸಾವಿರ ರೂಮ್ ಗಳನ್ನು ನೀಡಲಾಗುವುದು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಬ್ರಹ್ಮೋತ್ಸವದ ಸಂದರ್ಭದಲ್ಲಿ 20 ರಾಜ್ಯಗಳ 300ಕ್ಕೂ ಹೆಚ್ಚು ಕಲಾವಿದರ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಹೆಲ್ಪ್ ಡೆಸ್ಕ್ ಗಳನ್ನು ತೆರೆಯಲಾಗಿದ್ದು, 10,000 ಸ್ವಯಂಸೇವಕರು, 5000 ಪೊಲೀಸರು, 3000ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.