ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ಗಳಲ್ಲಿರುವ ಎಲ್ಲಾ ಸದಸ್ಯರು ಸೆಪ್ಟೆಂಬರ್ 30ರ ಒಳಗಾಗಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಕೊಪ್ಪಳ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಗಳಲ್ಲಿರುವ ಎಲ್ಲಾ ಸದಸ್ಯರು ಸೆಪ್ಟೆಂಬರ್ 30ರ ಒಳಗಾಗಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಕೊಪ್ಪಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ತಿಳಿಸಿದ್ದಾರೆ.
ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿರುವ ಸಿಬ್ಬಂದಿಗಳು, ಬೇರ್ಫೂಟ್ ಟೆಕ್ನಿಷಿಯನ್ ಗಳು, ಜಿಕೆಎಂಗಳಿಗೆ ತರಬೇತಿ ನೀಡುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೊದಲನೇ ಹಂತದಲ್ಲಿ ಪ್ರಾಯೋಗಿಕವಾಗಿ ತುಮಕೂರು, ಕೊಪ್ಪಳ, ಕೋಲಾರ, ಹಾಸನ ಹಾಗೂ ಹಾವೇರಿ ಜಿಲ್ಲೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರ ಪ್ರತಿಯೊಬ್ಬರ ಎಣಿಕೆ ಮೂಲಕ ಎನ್.ಎಂ.ಎಂ.ಎಸ್ ಹಾಜರಾತಿ ಸಂಖ್ಯೆ ಆನ್ಲೈನ್ ತೆಗೆದುಕೊಳ್ಳುತ್ತಿದ್ದು, ಇ-ಕೆವೈಸಿ ಹೊಂದಿರುವರು ಅವರ ಹಾಜರಾತಿ ತೆಗೆದುಕೊಳ್ಳುವಾಗ ಅವರ ಆಧಾರ್ ನಂಬರ್ ಮತ್ತು ಸ್ಥಳದಲ್ಲಿ ಹಾಜರಿದ್ದವರ ಮುಖ ಹೊಂದಾಣಿಕೆಯಾಗಿದ್ದಲ್ಲಿ ಮಾತ್ರ ಅವರ ಎನ್.ಎಂ.ಎಂ.ಎಸ್ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ ಒಟ್ಟು 1,11,030 ಸಕ್ರೀಯ(Active) ಕೂಲಿಕಾರರಿದ್ದು, ಇಲ್ಲಿಯವರೆಗೆ 43,849 ಕೂಲಿಕಾರರು ಇ-ಕೆವೈಸಿ ಹೊಂದಿದ್ದು, 67,181 ಕೂಲಿಕಾರರು ಇ-ಕೆವೈಸಿ ಹೊಂದುವದು ಬಾಕಿ ಇರುತ್ತದೆ. ಈಗಾಗಲೇ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಐಇಸಿ ಕಾರ್ಯಕ್ರಮಗಳಾದ ಮೈಕ್ ಮೂಲಕ, ಸ್ವಚ್ಛ ವಾಹಿನಿಯ ಮೂಲಕ ಪ್ರಚಾರ ಕೈಗೊಂಡಿದ್ದು, ತಾಲೂಕಿನಲ್ಲಿ 67,181 ಕೂಲಿಕಾರರು ಇ-ಕೆವೈಸಿ ಹೊಂದುವುದು ಬಾಕಿ ಇರುವದರಿಂದ ಪ್ರತಿಯೊಬ್ಬ ನರೇಗಾ ಕೂಲಿಕಾರರು ತಪ್ಪದೇ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಇ-ಕೆವೈಸಿ ಹೊಂದುವುದು.
ಇ-ಕೆವೈಸಿ ಮಾಡಿಸದೇ ಇರುವಂತಹ ಕೂಲಿಕಾರರ ಎನ್.ಎಂ.ಎಂ.ಎಸ್.(NMMS)ನಲ್ಲಿ ಹಾಜರಾತಿಯನ್ನು ಅಕ್ಟೋಬರ್ 1 ರಿಂದ ತೆಗೆದುಕೊಳ್ಳುವದಿಲ್ಲ. ತುರ್ತಾಗಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಎಲ್ಲಾ ಕೂಲಿಕಾರರು ನಿಮ್ಮ ಆಧಾರ್ ಕಾರ್ಡ್ ಹಾಗೂ ಜಾಬ್ ಕಾರ್ಡ್ ನೊಂದಿಗೆ ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಇ-ಕೆವೈಸಿ ಹೊಂದಬೇಕೆಂದು ಕೊಪ್ಪಳ ತಾ.ಪಂ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.