ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಗಳ ಜೊತೆಗೆ ನಂಟು ಮತ್ತು ಹಣ ಪಡೆದ ಹಿನ್ನೆಲೆಯಲ್ಲಿ ಎರಡು ಠಾಣೆಗಳ ಒಟ್ಟು 11 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ರಾಜ್ಯ ಸರ್ಕಾರ ಡ್ರಗ್ಸ್ ಮುಕ್ತ ಕರ್ನಾಟಕ ಕನಸು ಕಂಡಿದೆ. ಆದರೆ, ಪೆಡ್ಲರ್ ಜೊತೆಗೆ ನಿರಂತರ ನಂಟನ್ನು ಪೊಲೀಸರು ಹೊಂದಿದ್ದಾರೆ. ಡ್ರಗ್ ಪೆಡ್ಲರ್ ಗಳೊಂದಿಗೆ ಪೊಲೀಸ್ ಸಿಬ್ಬಂದಿ ಪಾರ್ಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಮಾಡಲು ಪೊಲೀಸರೇ ಶ್ರೀರಕ್ಷೆ ನೀಡಿದ್ದಾರೆ. ತಿಂಗಳಿಗೆ 1.5 ಲಕ್ಷದಿಂದ 2 ಲಕ್ಷ ರೂ. ಮಾಮೂಲಿ ಪಡೆಯುತ್ತಿದ್ದರು ಎನ್ನಲಾಗಿದೆ.
ಚಾಮರಾಜಪೇಟೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಟಿ. ಮಂಜಣ್ಣ, ಹೆಡ್ ಕಾನ್ಸ್ ಟೇಬಲ್ ರಮೇಶ್, ಶಿವರಾಜ್, ಪಿಸಿ ಮಧುಸೂದನ್, ರಮೇಶ್, ಪ್ರಸನ್ನ, ಶಂಕರ ಬೆಳಗಲಿ, ಆನಂದ್ ಅವರನ್ನು ಅಮಾನತು ಮಾಡಲಾಗಿದೆ.
ಅದೇ ರೀತಿ ಜೆಜೆ ನಗರ ಠಾಣೆಯ ಎಎಸ್ಐ ಕುಮಾರಸ್ವಾಮಿ, ಹೆಡ್ ಕಾನ್ಸ್ಟೇಬಲ್ ಆನಂದ್ ಮತ್ತು ಸಿಬ್ಬಂದಿ ಬಸವನಗೌಡ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ.
ಆಗಸ್ಟ್ 22 ರಂದು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರು ಜನರನ್ನು ಆರ್.ಆರ್. ನಗರ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು. ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಬರುವ ಟೈಡಲ್- 100 ಮಾತ್ರೆಗಳನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು. ಸಲ್ಮಾನ್, ನಯಾಜುಲ್ಲಾ, ನಯಾಜ್ ಖಾನ್ ಸೇರಿ ಆರು ಜನರನ್ನು ಬಂಧಿಸಲಾಗಿತ್ತು. ಆರೋಪಿಗಳ ಬಳಿ ಒಂದು ಸಾವಿರ ಟೈಡಲ್-100 ಮಾತ್ರೆಗಳು ಪತ್ತೆಯಾಗಿದ್ದವು.
ಬಂಧಿತ ಆರೋಪಿಗಳ ಮೊಬೈಲ್ ಪರಿಶೀಲಿನೆ ವೇಳೆ ಅಧಿಕಾರಿಗಳಿಗೆ ಶಾಕ್ ಕಾದಿತ್ತು, ಪೊಲೀಸರ ಜೊತೆಗೆ ನಿರಂತರ ಸಂಪರ್ಕದಲ್ಲಿ ಡ್ರಗ್ ಪೆಡ್ಲರ್ಸ್ ಗಳು ಇರುವುದು ಕಂಡುಬಂದಿತ್ತು. ಹಣಕಾಸಿಗೆ ಸಂಬಂಧಿಸಿದ ಮೆಸೇಜ್ ಮತ್ತು ಆಡಿಯೋ ಪತ್ತೆಯಾಗಿತ್ತು. ಆರೋಪಿಗಳ ಜೊತೆಗೆ ಪೊಲೀಸರು ಪಾರ್ಟಿ ಮಾಡಿದ್ದ ಫೋಟೋಗಳು ಪತ್ತೆಯಾಗಿದ್ದವು. ತನಿಖೆಗಾಗಿ ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಪೊಲೀಸರು ಮಾಮೂಲಿ ಪಡೆಯುತ್ತಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿತ್ತು.
ಕಡಿಮೆ ಬೆಲೆಗೆ ಟೈಡಲ್ ಮಾತ್ರೆಗಳನ್ನು ಖರೀದಿಸಿ 300- 400 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಪೊಲೀಸರು ಮಾರಾಟ ಮಾಡಿಸುತ್ತಿದ್ದರು. ಪ್ರತಿ ತಿಂಗಳು ಇನ್ಸ್ಪೆಕ್ಟರ್ ಸೇರಿ ಸಿಬ್ಬಂದಿಗೆ ಆರೋಪಿಗಳು ಹಣ ನೀಡುತ್ತಿದ್ದರು. ತಮ್ಮ ಸಂಬಂಧಿಕರ ಖಾತೆಗೂ ಪೊಲೀಸರು ಹಣ ಹಾಕಿಸಿಕೊಂಡಿದ್ದಾರೆ. ಪೊಲೀಸರ ಕಳ್ಳಾಟಕ್ಕೆ ಸಂಬಂಧಿಸಿದಂತೆ ಡಿಸಿಪಿಗೆ ತನಿಖಾಧಿಕಾರಿ ವರದಿ ನೀಡಿದ್ದರು. ವರದಿ ಆಧರಿಸಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.