ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಗೃಹ ಇಲಾಖೆಯ ವೈಫಲ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಮದ್ದೂರಿನಲ್ಲಿ ಮೊನ್ನೆ ದೊಡ್ಡ ಮೆರವಣಿಗೆ ನಡೆದರೂ ಎಸ್ ಪಿ ಇರಲಿಲ್ಲ. ಮಹಿಳೆಯರ ರಕ್ಷಣೆಗಾಗಿ ಒಬ್ಬ್ ಕಾನ್ಸ್ ಟೇಬಲ್ ಕೂಡ ಇರಲಿಲ್ಲ. ಕಲ್ಲು ಹಿಡಿದು ಮಸೀದಿ ಒಳಗೆ ಕೂರ್ತಾರೆ. ಮೆರವಣಿಗೆ ಬರುತ್ತಿದ್ದಂತೆ ಕಲ್ಲು ತೂರಾಟ ನಡೆಸುತ್ತಾರೆ ಎಂದರೆ ಇದೆಲ್ಲ ಪೊಲೀಸ್ ಇಲಾಖೆ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯವಲ್ಲದೇ ಬೇರೇನು? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳು ನೆಮ್ಮದಿಯಾಗಿ ಹಬ್ಬ ಆಚರಣೆ ಮಾಡುವ ಸ್ಥಿತಿಯಿಲ್ಲ. ಗಣೇಶ ಹಬ್ಬವನ್ನೂ ಸಂಭ್ರಮದಿಂದ ಆಚರಣೆ ಮಾಡುವಂತಹ ವಾತಾವರಣ ನಮ್ಮ ರಾಜ್ಯದಲ್ಲಿ ಇಲ್ಲ ಎಂದರೆ ಕಾನೂನು ಸುವ್ಯವಸ್ಥೆ ಎಂಬುದು ಎಷ್ಟರಮಟ್ಟಿಗೆ ಸರಿಯಿದೆ? ನಮ್ಮ ಹಬ್ಬವನ್ನು ಆಚರಿಸಲು ಆತಂಕದ ವಾತಾವರಣವಿದೆ ಎಂದರೆ ಈ ಸರ್ಕಾರ ಎಷ್ಟರ ಮಟ್ಟಿಗೆ ಓಲೈಕೆ ರಾಜಕಾರಣದಲ್ಲಿ ತಿಡಗಿದೆ ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಕಿಡಿಕಾರಿದರು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಶಾಂತಿ ಕದಡುವುದೇ ಬಿಜೆಪಿ ಉದ್ದೇಶ ಎಂಬ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರಿವ ಸಿದ್ದರಾಮಯ್ಯನವರೇ ಇಂತಹ ಹೇಳಿಕೆ ನೀಡಿದರೆ ರಾಜ್ಯವನ್ನು ಭಗವಂತೇ ಕಾಪಾಡಬೇಕು ಎಂದು ಹೇಳಿದರು.