ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಹೇಶ್ ತಿಮರೋಡಿ ಎಂಬಾತ 28 ಕೊಲೆ ಆರೋಪ ಮಾಡಿದ್ದಾನೆ. ಈ ಬಗ್ಗೆ ಎಸ್ ಐಟಿ ರಚನೆ ಮಾಡಿ ತನಿಖೆ ನಡೆಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಮುಸುಕುಧಾರಿಯೊಬ್ಬ ಹೇಳಿಕೆ ಕೊಟ್ಟಿದ್ದಕ್ಕೆ ಎಸ್ ಐಟಿ ರಚಿಸಿ ಆತ ಹೇಳಿದ ಕಡೆಯಲ್ಲೆಲ್ಲ ಮಣ್ಣು ಅಗೆದು ಶೋಧ ನಡೆಸುತ್ತಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ವಿರುದ್ಧವೇ 28 ಕೊಲೆ ಮಾಡಿರುವ ಆರೋಪವನ್ನು ವ್ಯಕ್ತಿಯೊಬ್ಬ ಮಾಡಿದ್ದಾನೆ. ಈ ಬಗ್ಗೆಯೂ ಎಸ್ ಐಟಿ ರಚಿಸಲಿ. ಎಲ್ಲೆಲ್ಲಿ ಶವ ಹೂತಿದ್ದಾರೆ ಅದರ ಬಗ್ಗೆ ಶೋಧ ನಡೆಯಲಿ ಎಂದರು.
ಧರ್ಮಸ್ಥಳಕ್ಕೆ ಒಂದು ನ್ಯಾಯ, ಮುಖ್ಯಮಂತ್ರಿಗಳಿಗೆ ಒಂದು ನ್ಯಾಯವೇ? ಈಗ ಸಿಎಂ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಈ ಬಗ್ಗೆಯೂ ಎಸ್ ಐಟಿ ರಚಿಸಿ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಆತ ಹೇಳಿಕೆ ಕೊಟ್ಟು 48 ಗಂಟೆಯಾಗಿದೆ. ಈವರೆಗೆ ಆತನ ವಿರುದ್ಧ ಕ್ರಮ ಕೈಗೊಂಡಿಲ್ಲ. ಸರ್ಕಾರ ಇದ್ದಂತೆ ಕಾಣುತ್ತಿಲ್ಲ. ಗೂಂಡಾಗಳಿಗೆ ಅಧಿಕಾರ ಒಪ್ಪಿಸಿ ಸುಮ್ಮನಿದ್ದಾರೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.