ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಿನಲ್ಲಿ 16 ಜನರಿಗೆ ವಂಚಿಸಲಾಗಿದೆ. ಹೆಬ್ಬಾಳ್ಕರ್ ಅವರ ಬೆಂಬಲಿಗ ಮಂಜುನಾಥ್ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ.
ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 16 ಮಂದಿಯಿಂದ 34 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಹೋರಾಟಗಾರ ಜಯಂತ್ ತಿನೇಕರ್ ಆರೋಪಿಸಿದ್ದು, ರಾಜ್ಯಪಾಲರ ಆದೇಶ ಎಂದು ನಕಲಿ ಪತ್ರಗಳನ್ನು ನೀಡಿ ವಂಚಿಸಲಾಗಿದೆ. ಹೆಬ್ಬಾಳ್ಕರ್ ನಕಲಿ ಸಹಿ ಮಾಡಿ ಆದೇಶ ಪ್ರತಿ ವಿತರಿಸಿದ್ದಾರೆ. ಬೆಳಗಾವಿ, ಬೈಲಹೊಂಗಲ, ಖಾನಾಪುರ ಸೇರಿ ಹಲವಡೆ ವಂಚನೆ ಮಾಡಲಾಗಿದೆ. 16 ಜನರಿಂದ 34 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ ಹೆಸರು ತಳಕು ಹಾಕಿಕೊಂಡಿದೆ. ನಾವು ಕೊಟ್ಟ ದೂರು ಪೊಲೀಸರು ಸ್ವೀಕರಿಸದ ಹಿನ್ನೆಲೆಯಲ್ಲಿ ಗಂಧಿಗವಾಡ ಕಾವ್ಯಾ ಎಳ್ಳೂರ ಅವರಿಂದ ನ್ಯಾಯಾಲಯಕ್ಕೆ ದೂರು ಕೊಡಿಸಲಾಗಿದೆ. ವಂಚನೆ ಬಗ್ಗೆ ನಾವು ಕೋರ್ಟ್ ನಲ್ಲಿ ಕೇಸು ಹಾಕಿದ್ದೇವೆ. ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವರಿಗೂ ದೂರು ನೀಡಿದ್ದೇವೆ ಎಂದು ಬೆಳಗಾವಿಯಲ್ಲಿ ಸಾಮಾಜಿಕ ಹೋರಾಟಗಾರ ಜಯಂತ್ ತಿನೇಕರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್ಪಿ ಭೀಮಾಶಂಕರ ಗುಳೇದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಬಗ್ಗೆ ದೂರು ದಾಖಲಿಸಲಾಗಿದೆ. ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಈ ಬಗ್ಗೆ ಪತ್ರ ಬರೆದಿದ್ದರು ಎಂದು ಹೇಳಿದ್ದಾರೆ.
ಮುಖ್ಯ ಆರೋಪಿ ಮಂಜುನಾಥ 14 ಮಂದಿಯಿಂದ 30 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದ ದೂರು ಇದೆ. ರಾಜ್ಯಪಾಲರ ಸಹಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಸಹಿ ಹಾಗೂ ಅವರ ಆಪ್ತ ಸಹಾಯಕರ ಸಹಿಯನ್ನು ನಕಲು ಮಾಡಲಾಗಿದೆ. ಸಚಿವರ ಲೆಟರ್ ಹೆಡ್ ಬಳಕೆ ಮಾಡಿರುವುದು ಗೊತ್ತಾಗಿದೆ. ತನಿಖೆ ನಡೆಸಲಾಗಿದೆ. ದೂರು ದಾಖಲಿಸಲು ಯಾರೂ ಮುಂದೆ ಬಾರದ ಕಾರಣ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.