ಗುರುಗ್ರಾಮ: ಮೊಬೈಲ್ ಕದ್ದಿದ್ದು ಈತನೇ ಎಂದು ಬಾಲಕ ಹೇಳಿದ್ದಕ್ಕೆ ಅಪ್ರಾಪ್ತ ಯುವಕನೊಬ್ಬ 7 ವರ್ಷದ ಬಾಲಕನನ್ನೇ ಹತ್ಯೆಗೈದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಆರೋಪಿ ಯುವಕ ಮೊಬೈಲ್ ಕದ್ದಿದ್ದ. ಇದನ್ನು ಗಮನಿಸಿದ್ದ ಬಾಲಕ ಮೊಬೈಲ್ ಕದ್ದಿದು ಈತನೇ ಎಂದು ಹೇಳಿದ್ದಾನೆ. ತನ್ನನ್ನು ಹಿಡಿದುಕೊಟ್ಟಿದ್ದಕ್ಕಾಗು ಕೋಪಗೊಂಡ ಯುವಕ ಅದೇ ಸೇಡಿನಲ್ಲಿ ಎರಡು ತಿಂಗಳ ಬಳಿಕ ಬಾಲಕನನ್ನು ಹತ್ಯೆಗೈದಿದ್ದಾನೆ.
ಮನೆಗೆ ಬಂದ ಬಾಲಕನ ತಾಯಿಗೆ ಮಗ ಕಾಣಿಸದಿದ್ದಾಗ ಗಾಬರಿಯಾಗಿದ್ದಾರೆ. ಬೇರೆ ಮಕ್ಕಳ ಜೊತೆ ಆಟವಾಡುತ್ತಿರಬಹುದು ಎಂದು ಕೊಂಡಿದ್ದರು. ಆದರೆ ಎಷ್ಟು ಹೊತ್ತಾದರೂ ಬಾಲಕನ ಸುಳಿವಿಲ್ಲ ಇದರಿಂದ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಜುಲೈ 20 ರಂದು ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನ ಎದೆ, ಹಣೆಯ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದವು. ತನಿಖೆ ನಡೆಸಿದಾಗ ಬಾಲಕ ಕೊಲೆಯಾಗಿರುವುದು ತಿಳಿದುಬಂದಿದೆ. ಆರೋಪಿ ಯುವಕನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ, ಕೆಲ ದಿನಗಳ ಹಿಂದೆ ತಾನು ಮೊಬೈಲ್ ಕದ್ದಿದ್ದನ್ನು ಬಾಲಕ ತನ್ನ ತಂದೆಗೆ ಹೇಳಿದ್ದ. ಎಲ್ಲರ ಮುಂದೆ ನನ್ನನ್ನು ಕ್ಷಮೆಯಾಚಿಸುವಂತೆ ಮಾಡಿದ್ದ. ಇದರಿಂದ ಅವಮಾನಗೊಂಡು ಬಾಲಕನನ್ನು ಹತ್ಯೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.