‘ಮಹಾನಗರ ಪಾಲಿಕೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ’ : ರಾಜ್ಯ ಸರ್ಕಾರದ ವಿರುದ್ಧ ಬಿ.ವೈ ವಿಜಯೇಂದ್ರ ಕಿಡಿ

ಬೆಂಗಳೂರು : ರಾಜ್ಯದ 10 ಮಹಾನಗರ ಪಾಲಿಕೆಗಳು ಸ್ಥಬ್ಧವಾಗಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದ್ದರೂ ನಿಷ್ಕ್ರಿಯಗೊಂಡಿರುವ ಕಾಂಗ್ರೆಸ್ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡು ಮೊಂಡುತನ ಹಾಗೂ ಹೊಣೆಗೇಡಿತನ ಪ್ರದರ್ಶಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ಧಾಳಿ ನಡೆಸಿದ್ದಾರೆ.

30 ಸಾವಿರ ನೌಕರರುಗಳು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಲು ರಾಜ್ಯ ಸರ್ಕಾರದ ತಾರತಮ್ಯ ನೀತಿಯೇ ಕಾರಣವಾಗಿದೆ. ನಗರ ಪಾಲಿಕೆ ನೌಕರರ ನ್ಯಾಯಯುತ ಬೇಡಿಕೆಗೆ ಈ ಕೂಡಲೇ ಸರ್ಕಾರ ಸ್ಪಂದಿಸಿ ಮುಷ್ಕರ ಸ್ಥಗಿತಗೊಳ್ಳುವಂತಾಗಲು ಮುಖ್ಯಮಂತ್ರಿಗಳು ಜವಾಬ್ದಾರಿಯ ನಡೆ ಅನುಸರಿಸಬೇಕೆಂದು ಒತ್ತಾಯಿಸುವೆ. ಅನಿರ್ದಿಷ್ಟಾವಧಿಯವರೆಗೆ ನಡೆಯುತ್ತಿರುವ ನೌಕರರ ಹೋರಾಟ ಮುಂದುವರೆದಲ್ಲಿ ಪಾಲಿಕೆಗಳ ವ್ಯಾಪ್ತಿಯ ನಗರಗಳ ಸ್ಥಿತಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ರೀತಿಯಲ್ಲಿ ಅಸ್ತವ್ಯಸ್ತಗೊಳ್ಳಲಿದೆ, ಸ್ವಚ್ಛತೆ ಸೇರಿದಂತೆ ದೈನಂದಿನ ಮೂಲಭೂತ ಸೌಕರ್ಯಗಳು ಹಾಗೂ ಸ್ಥಳೀಯ ಸಂಸ್ಥೆಗಳ ಆಡಳಿತಾತ್ಮಕ ಸೇವೆ ದೊರೆಯದೇ ಜನ ಸಂಕಷ್ಟಕ್ಕೀಡಾಗಲಿದ್ದಾರೆ, ಈಗಾಗಲೇ ಮುಷ್ಕರ ವ್ಯಾಪ್ತಿಯ ನಗರಗಳ ನಾಗರಿಕರಿಗೆ ಬಿಸಿ ತಟ್ಟುತ್ತಿದೆ. ‘ಒಂದು ಕಣ್ಣಿಗೆ ಬೆಣ್ಣೆ-ಮತ್ತೊಂದು ಕಣ್ಣಿಗೆ ಸುಣ್ಣ’ ಎನ್ನುವ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು,ಸಿಬ್ಬಂದಿ ಸಮೂಹ ಹಾಗೂ ಸರ್ಕಾರಿ ನೌಕರರ ನಡುವೆ ಸವಲತ್ತು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅನುಸರಿಸಿರುವ ತಾರತಮ್ಯ ನೀತಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.

ಪಾಲಿಕೆ ಸಿಬ್ಬಂದಿಗಳ ನ್ಯಾಯಯುತ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸುವುದು ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ಬಡಿದಾಟದಲ್ಲಿ ಈಗಾಗಲೇ ವಿಧಾನಸೌಧ ಬಹುತೇಕ ಬಣಗುಟ್ಟುತ್ತಿದೆ,ಇದರ ಪರಿಣಾಮದಿಂದಾಗಿ ಸರ್ಕಾರದ ಆಡಳಿತ ವ್ಯವಸ್ಥೆಯೂ ನಿದ್ದೆಗೆ ಜಾರಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯ ಕೆಲಸಗಳು ತಲೆ ಎತ್ತಿ ವರ್ಷಗಳೇ ಕಳೆಯುತ್ತಿದೆ, ಬೆಲೆ ಏರಿಕೆಯ ತತ್ತರದಿಂದ ಹಾಗೂ ಸರ್ಕಾರಿ ಕೆಲಸಗಳು ಸುಲಲಿತವಾಗಿ ಸಾಗದೇ ಜನಸಾಮಾನ್ಯರು ಸರ್ಕಾರಕ್ಕೆ ಇಡಿ ಶಾಪ ಹಾಕುತ್ತಿದ್ದಾರೆ, ನಗರ ಪಾಲಿಕೆಯಂತಹ ಸ್ಥಳೀಯ ಸಂಸ್ಥೆಗಳೂ ಕೂಡ ಸ್ಥಗಿತಗೊಂಡರೆ ರಾಜ್ಯದಲ್ಲಿ ಅರಾಜಕತೆ ತಾಂಡವವಾಡುವುದರಲ್ಲಿ ಅನುಮಾನ ಕಾಣುತ್ತಿಲ್ಲ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಮೊದಲು ನಗರ ಪಾಲಿಕೆ ನೌಕರರ ಬೇಡಿಕೆ ಈಡೇರಿಸಿ ನಗರ ಪಾಲಿಕೆಗಳ ಆಡಳಿತ ಸಹಜ ಸ್ಥಿತಿಗೆ ಮರಳುವಂತಾಗಲು ಕ್ರಮವಹಿಸಲಿ ಎಂದು ಆಗ್ರಹಿಸುವೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read