ಡೆಹ್ರಾಡೂನ್: ಉತ್ತರಾಖಂಡದಾದ್ಯಂತ ವರುಣಾರ್ಭಟ ಕೊಂಚ ಕಡಿಮೆಯಾಗಿದೆ. ಉತ್ತರ ಕಾಶಿಯಲ್ಲಿ ಗಂಗೋತ್ರಿ-ಯಮುನೋತ್ರಿ ದೇವಾಲಯಗಳು ತೆರೆದಿವೆ. ಈ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಾರ್ ಧಾಮ್ ಯಾತ್ರೆ ಪುನರಾರಂಭವಾಗಿದೆ.
ಭಾರಿ ಮಳೆ, ಮೇಘಸ್ಫೋಟ ಹಿನ್ನೆಲೆಯಲ್ಲಿ ಚಾರ್ ಧಾಮ್ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿತ್ತು. ಇಂದು ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಚಾರ್ ಧಾಮ್ ಯಾತ್ರೆ ಮತ್ತೆ ಆರಂಭವಾಗಿದೆ ಎಂದು ಗರ್ವಾ ವಿಭಾಗೀಯ ಪೊಲೀಸ್ ಆಯುಕ್ತ ವಿನಯ್ ಶಂಕರ್ ತಿಳಿಸಿದ್ದಾರೆ.
ಚಾರ್ ಧಾಮ್ ಯಾತ್ರೆಗೆ ಸಾಗುವ ಮಾರ್ಗಗಳಲ್ಲಿ ಅಲ್ಲಲ್ಲಿ ಹವಾಮಾನ ಪರಿಸ್ಥಿತಿಯನ್ನು ಆಧರಿಸಿ ವಾಹನಗಳನ್ನು ತಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹರಿದ್ವಾರ, ಋಷಿಕೇಶ, ರುದ್ರಪ್ರಯಾಗ, ಶ್ರೀನಗರ, ಸೋನ್ ಪ್ರಯಾಗ್ ಹಾಗೂ ವಿಕಾಸನಗರಗಳಲ್ಲಿ ಚಾರ್ ಧಾಮ್ ಯಾತ್ರಿಕರನ್ನು ತಡೆದು, ಸುರಕ್ಷಿತ ಸ್ಥಳಗಳಿಗೆ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ಇಂದು ಮಳೆ ಕಡಿಮೆಯಾಗಿರುವುದರಿಂದ ಯಾತ್ರೆ ಮುಂದುವರೆದಿದೆ.