ಮಂಗಳೂರು: ತಮ್ಮನ ಅಂತ್ಯಸಂಸ್ಕಾರಕ್ಕೆಂದು ಬಂದಿದ್ದ ಟೆಕ್ಕಿ ಅಕ್ಕ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದಪಾವಂಜೆ ಬಳಿ ನಡೆದಿದೆ.
ಬಂಗ್ರಕೂಳೂರು ನಿವಾಸಿ ಶೃತಿ (27) ಮೃತ ಸಹೋದರಿ. ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿ ಚೆನ್ನೈನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಶೃತಿ, ತನ್ನ ಸಹೋದರನ ಸಾವು ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ಊರುಗೆ ಬಂದಿದ್ದರು. ಮೆಕ್ಯಾನಿಕ್ ಆಗಿದ್ದ ಶೃತಿ ಸಹೋದರ ಸುಜಿತ್ ಜೂ.10ರಂದು ಮೃತಪಟ್ಟಿದ್ದರು. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ರಜೆಯ ಮೇಲೆ ಶೃತಿ ಮಂಗಳೂರಿಗೆ ಬಂದಿದ್ದರು.
ಬ್ಯಾಂಕ್ ನಲ್ಲಿ ಕೆಲಸ ಮುಗಿಸಿ ತಂದೆಯ ಜೊತೆ ಸ್ಕೂಟರ್ ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಭಾರಿ ಮಳೆ ಶುರುವಾಗಿದೆ. ಮಳೆ ಬಂತೆಂದು ಸ್ಕೂಟರ್ ನಿಲ್ಲಿಸಿ ರೇನ್ ಕೋಟ್ ಧರಿಸುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರಿನ ಚಕ್ರಕ್ಕೆ ಸಿಲುಕಿ ಶೃತಿಯವರನ್ನು ಎಳೆದೊಯ್ದು ಸಿಮೆಂಟ್ ಸ್ಲ್ಯಾಬ್ ಗೆ ಅಪ್ಪಳಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಶೃತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಶೃತಿ ತಂದೆ ಗೋಪಾಲ ಆಚಾರ್ಯ ಕಾಲು ಮುರಿದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.