ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ತಾಯಿ ಹುಲಿ ಸೇರಿದಂತೆ ಐದು ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾದ ಅಲಿಯಾಸ್ ಮಾದುರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆತನಿಗೆ ಹುಲಿಗಳನ್ನು ಸಾಯಿಸಲು ಕ್ರಿಮಿನಾಷಕ ತಂದು ಕೊಟ್ಟಿದ್ದ ನಾಗರಾಜ್ ಎಂಬಾತನನ್ನು ಬಂಧಿಸಲಾಗಿದೆ.
ಮಾದ ಅಲಿಯಾಸ್ ಮಾದುರಾಜುಗೆ ಸೇರಿದ ಹಸುವನ್ನು ಹುಲಿ ಬಲಿಪಡೆದಿತ್ತು. ಇದರಿಂದ ತೀವ್ರವಾಗಿ ದು:ಖಿತನಾಗಿದ್ದ ಮಾದ ತನ್ನ ನೋವನ್ನು ನಾಗರಾಜ್ ಬಳಿ ಹೇಳಿಕೊಂಡಿದ್ದ. ಹಸು ಬಲಿ ಪಡೆದಿದ್ದ ಹುಲಿಯನ್ನು ಕೊಲ್ಲಲು ಇಬ್ಬರೂ ನಿರ್ಧರಿಸಿದ್ದರು. ಹುಲಿ ಕೊಲ್ಲಲು ನಾಗರಾಜ್ ಕ್ರಿಮಿನಾಶಕವನ್ನು ತಂದಿದ್ದರು. ಬಳಿಕ ಮೃತ ಹಸುವಿನ ಮೇಲೆ ಕ್ರಿಮಿನಾಶಕ ಸಿಂಪಡಿಸಿ ಬಂದಿದ್ದರು.
ಮರುದಿನ ವಿಷಪೂರಿತ ಹಸುವಿನ ಮಾಂಸ ತಿಂದು ಹುಲಿ ಹಾಗೂ ಹುಲಿ ಮರಿಗಳು ಸಾವನ್ನಪ್ಪಿದ್ದವು. ಇದೀಗ ಪ್ರಕರಣ ಸಂಬಂಧ ಮಾದ ಅಲಿಯಾಸ್ ಮಾದುರಾಜು ಹಾಗೂ ನಾಗರಾಜ್ ಇಬ್ಬರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.