ಬೆಂಗಳೂರು: ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನೇಮಕವಾಗಿರುವ ಸರ್ಕಾರಿ ಅಧಿಕಾರಿಗಳು, ನೌಕರರು ಪ್ರಾನ್ ಪಡೆಯದಿದ್ದರೂ ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಪಿಂಚಣಿ ಸೌಲಭ್ಯ ಕಲ್ಪಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಎನ್ಪಿಎಸ್ ಗೆ ಒಳಪಡುವ ಅಧಿಕಾರಿಗಳು, ನೌಕರರಿಗೆ ನಿವೃತ್ತಿ, ಮರಣ ಉಪದಾನ ಹಾಗೂ ಕುಟುಂಬ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ. ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ ನೌಕರರ ನಾಮನಿರ್ದೇಶಿತರು ಕುಟುಂಬ ಪಿಂಚಣಿಯನ್ನು ಆಯ್ಕೆ ಮಾಡಿಕೊಂಡಲ್ಲಿ ಪ್ರಾನ್ ಖಾತೆಯಲ್ಲಿ ಜಮೆಯಾದ ಮೊತ್ತದಲ್ಲಿ ನೌಕರರ ವಂತಿಗೆ ಮೇಲಿನ ಆದಾಯವನ್ನು ಮೃತ ನಿರ್ದೇಶಕರಿಗೆ ಇತ್ಯರ್ಥಪಡಿಸಲು ಆದೇಶಿಸಲಾಗಿತ್ತು. ಇದೀಗ ಈ ಆದೇಶವನ್ನು ಸರ್ಕಾರ ಮತ್ತಷ್ಟು ವಿಸ್ತರಿಸಿದೆ.
ಎನ್.ಪಿ.ಎಸ್. ಅಧಿಕಾರಿ ನೌಕರರು ಪ್ರಾನ್ ಖಾತೆ ಪಡೆಯುವ ಮುಂಚಿತವಾಗಿ ಸೇವೆಯಲ್ಲಿರುವಾಗಲೇ ಮೃತರಾದಲ್ಲಿ ಕುಟುಂಬ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಮೃತ ಅಧಿಕಾರಿ ನೌಕರರು ಕಾರ್ಯನಿರ್ವಹಿಸುತ್ತಿರುವ ಇಲಾಖೆಗೆ ಸಂಬಂಧಿಸಿದ ಡಿಡಿಒ, ಮೃತ ಅಧಿಕಾರಿ, ನೌಕರರು ಪ್ರಾನ್ ಪಡೆಯದಿರುವ ಬಗ್ಗೆ ಇಲಾಖೆ ಮುಖ್ಯಸ್ಥರಿಂದ ದೃಢೀಕರಣ ಪಡೆದು ಕುಟುಂಬ ಪಿಂಚಣಿ ಮಂಜೂರು ಮಾಡುವ ಪ್ರಸ್ತಾವನೆಯನ್ನು ಮಹಾಲೇಖಪಾಲರಿಗೆ ಸಲ್ಲಿಸಬೇಕು ಎಂದು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.