ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢಮಾಸದ ಸಂಭ್ರಮ ಮನೆ ಮಾಡಿದೆ. ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇಂದು ಆಷಾಢಮಾಸದ ಮೊದಲ ಶುಕ್ರವಾರವಾದ ಹಿನ್ನೆಲೆಯಲ್ಲಿ ಭಕ್ತರ ದಂಡೇ ದೇವಿಯ ದರ್ಶನಕ್ಕೆ ಹರಿದು ಬಂದಿದೆ. ಭಕ್ತರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಬೆಟ್ಟಕ್ಕೆ ಬರುವ ಭಕ್ತರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಹಲವು ಮಾರ್ಪಾಡು ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ನಾಲ್ಕು ಕಡೆ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಪ್ರತ್ಯೇಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಲಲಿತ್ ಮಹಲ್ ಮೈದಾನದ ಬಳಿ ಇರುವ ನಿಲ್ದಾಣದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಉಚಿತ ಧರ್ಮದರ್ಶನಕ್ಕೆ 300 ಟಿಕೆಟ್ ಹಾಗೂ 2000 ರೂ. ಟಿಕೆಟ್ ಗೆ ಪ್ರತ್ಯೇಕ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಲಲಿತ ಮಹಲ್ ಮೈದಾನದ ಬಳಿಯೇ ಟಿಕೆಟ್ ಗಳನ್ನು ವಿತರಿಸಲಾಗುವುದು. ಬೆಟ್ಟದ ಮೇಲೆಯೂ ದರ್ಶನಕ್ಕೆ ಪ್ರತ್ಯೇಕ ದ್ವಾರಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿಗಳು ಬೆಳಗ್ಗೆ 5 ರಿಂದ 10 ಗಂಟೆಯ ಒಳಗೆ ದರ್ಶನ ಅವಕಾಶ ಕಲ್ಪಿಸಿದ್ದು, ಈ ಸಮಯದಲ್ಲಿ ದರ್ಶನಕ್ಕೆ ಬರುವಂತೆ ಕೋರಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಚಾಮುಂಡಿ ಬೆಟ್ಟದ ಕೆಳಗೆ ತಾವರೆಕಟ್ಟೆ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರೋಟೋಕಾಲ್ ಇರುವವರನ್ನು ಬಿಟ್ಟು ಯಾರ ವಾಹನಗಳಿಗೂ ಅವಕಾಶ ಇರುವುದಿಲ್ಲ. ಪ್ರೋಟೋಕಾಲ್ ಇರುವವರು, ಮಾಧ್ಯಮದವರು, ಪತ್ರಕರ್ತರು, ಗ್ರಾಮಸ್ಥರನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಅಧಿಕಾರಿಗಳು, ಪೊಲೀಸ್ ವಾಹನಗಳಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ಯಾವುದೇ ಖಾಸಗಿ ವಾಹನಗಳನ್ನು ಬಿಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.