ಕಾರವಾರ: ನಕಲಿ ಆಧಾರ್ ಕಾರ್ಡ್ ಮತ್ತು ಆರ್.ಟಿ.ಸಿ. ಬಳಸಿ ನ್ಯಾಯಾಲಯಕ್ಕೆ ವಂಚಿಸಿ ಅಪರಾಧಿಗಳಿಗೆ ಜಾಮೀನು ಕೊಡಿಸುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲಾ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಅವರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲು ಸೂಚಿಸಿದ್ದಾರೆ. ಬಂಧಿತ ಪ್ರಮುಖ ಆರೋಪಿ ಮಹಿಳೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಕಡಬ ಮೂಲದ ಪಿ.ಸಿ. ಅಲೈಸ್ ಕುರಿಯನ್ ಚಾಕು ಎಂದು ಗುರುತಿಸಲಾಗಿದೆ.
ನಕಲಿ ಆಧಾರ್ ಮತ್ತು ಆರ್.ಟಿ.ಸಿ. ದಾಖಲೆಗಳನ್ನು ಬಳಸಿ ಸುಮಾರು ಎಂಟು ಕಡೆಗಳಲ್ಲಿ ಅಪರಾಧಿಗಳಿಗೆ ಜಾಮೀನು ಕೊಡಿಸಿದ್ದಾಳೆ. ಈಕೆಯ ಜೊತೆಗೆ ಇಬ್ಬರು ವ್ಯಕ್ತಿಗಳು ನಕಲಿ ದಾಖಲೆಗಳನ್ನು ನೀಡುವಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಇತ್ತೀಚಿಗೆ ಶಿರಸಿಯ ಮಾದಕ ವಸ್ತು ಮಾರಾಟಗಾರನೊಬ್ಬನಿಗೆ ಜಾಮೀನು ಕೊಡಿಸಲು ಈ ಮಹಿಳೆ ಕೋರ್ಟಿಗೆ ಬಂದಿದ್ದು, ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಅವರಿಗೆ ಅನುಮಾನ ಬಂದಿದೆ. ತಕ್ಷಣ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಕೈಗೊಂಡು ಪರಿಶೀಲಿಸಿದಾಗ ನಕಲಿ ದಾಖಲೆಗಳ ಜಾಲ ಬೆಳಕಿಗೆ ಬಂದಿದೆ. ನ್ಯಾಯಾಲಯದ ಮುಖ್ಯ ಆಡಳಿತ ಅಧಿಕಾರಿ ರವೀಂದ್ರ ಆರ್. ನಾಯ್ಕ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಕಲಿ ದಾಖಲೆ ನೀಡಿ ವಂಚಿಸಿದ ಮಹಿಳೆ ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.