ಬೆಂಗಳೂರು: ಸರ್ಕಾರದಿಂದ ಮಂಜೂದಾದ ಜಮೀನು ಎರಡನೇ ಸಲ ಮಾರಾಟ ಮಾಡಿ ವಾಪಸ್ ಕೇಳುವುದು ಪಿಟಿಸಿಎಲ್ ಕಾಯ್ದೆಯ ದುರ್ಬಳಕೆಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸರ್ಕಾರದಿಂದ ಮಂಜೂರಾಗಿರುವ ಜಮೀನು ಮಾರಾಟ ಮಾಡಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ(ಕೆಲ ಜಮೀನುಗಳ ಪರಾಭಾರೆ ನಿಷೇಧ- PTCL) ಕಾಯ್ದೆಯಡಿ ಪಡೆದುಕೊಂಡು ಎರಡನೇ ಬಾರಿ ಮಾರಾಟ ಮಾಡಿ ಪುನಃ ತಮಗೆ ಹಿಂದಿರುಗಿಸಲು ನಿರ್ದೇಶನ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ರೀತಿಯ ನಿರ್ದೇಶನ ಕೋರಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕಾನೂನುಬಾಹಿರವಾಗುತ್ತದೆ ಮತ್ತು ಕಾಯ್ದೆಯ ದುರುಪಯೋಗ ಎನಿಸಿಕೊಳ್ಳುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಗೌಡ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಮಾಡಿದ್ದರೂ ಸೆಕ್ಷನ್ 4(2)ರ ಪ್ರಕಾರ ಎಸ್ಸಿ, ಎಸ್ಟಿ ಯವರಿಗೆ ಸರ್ಕಾರ ಮಂಜೂರು ಮಾಡಿದ್ದ ಜಮೀನನ್ನು ಯಾವುದೇ ಕಾಲಮಿತಿ ಇಲ್ಲದೆ ಪುನಃ ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಒಮ್ಮೆ ಮಾರಾಟ ಮಾಡಿ ಅದರ ಹಕ್ಕು ಪಡೆದು ಮತ್ತೆ ಮಾರಾಟ ಮಾಡಿ ಅದನ್ನು ಪುನಃ ಪಡೆಯುವ ಸಂಬಂಧಿಸಿದಂತೆ ಕಾಯ್ದೆಯಲ್ಲಿ ವಿವರಣೆ ನೀಡಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ. ಜಮೀನನ್ನು ಎರಡನೇ ಸಲ ಮಾರಿ ವಾಪಸ್ ಕೇಳುವುದು ಪಿಟಿಸಿಎಲ್ ಕಾಯ್ದೆಯ ದುರ್ಬಳಕೆಯಾಗುತ್ತದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.