ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಜೆಡಿಎಸ್ ಮುಖಂಡನನ್ನು ಬಂಧಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ್ದಲ್ಲದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಬೈಕ್ ಸವಾರ ನವೀನ್ ಗೌಡನನ್ನು ಜ್ಞಾನಭಾರತಿ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಜೂನ್ 21ರಂದು ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಗಳಾದ ಸಿ. ಕುಮಾರ್ ಮತ್ತು ದ್ವಾರಕನಾಥ್ ಅವರು ಕೃಷ್ಣ ಅರಮನೆ ಹೋಟೆಲ್ ಸಮೀಪ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಉಲ್ಲಾಳ ಕಡೆಯಿಂದ ಬೈಕ್ ನಲ್ಲಿ ಹೆಲ್ಮೆಟ್ ಧರಿಸದೆ ಬರುತ್ತಿದ್ದ ಆರೋಪಿ ನವೀನ್ ಗೌಡನ ವಾಹನ ತಡೆದು ತಪಾಸಣೆ ನಡೆಸಲಾಗಿದೆ.
ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡಪಾವತಿಸಲು ಸೂಚಿಸಲಾಗಿದ್ದು, ಇದರಿಂದ ಕೋಪಗೊಂಡ ನವೀನ್ ಗೌಡ ನಿಮಗೆ ಯಾರು ದಂಡ ಹಾಕಲು ಹೇಳಿದ್ದು? ನಾನು ಜೆಡಿಎಸ್ ಸ್ಥಳೀಯ ಘಟಕದ ಅಧ್ಯಕ್ಷ, ಹೆಲ್ಮೆಟ್ ಧರಿಸುವುದಿಲ್ಲ, ದಂಡವನ್ನೂ ಕಟ್ಟುವುದಿಲ್ಲ. ನಾನು ಉದ್ದೇಶಪೂರ್ವಕವಾಗಿಯೇ ಹೆಲ್ಮೆಟ್ ಹಾಕದೆ ಬಂದಿದ್ದೇನೆ ಎಂದು ಏರುಧ್ವನಿಯಲ್ಲಿ ಮಾತನಾಡಿದ್ದಾನೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಪಿಎಸ್ಐ ಕುಮಾರ್ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ಬೈಕ್ ವಶಕ್ಕೆ ಪಡೆಯಲಾಗಿದೆ.