ತುಮಕೂರು: ಜೀನ್ಸ್ ಧರಿಸಿ ಬಂದ ಕಾರಣಕ್ಕೆ ಎಂಬಿಎ ಎಂಸಿಎ ಕೋರ್ಸ್ ಗಳ ಪ್ರವೇಶಕ್ಕೆ ಭಾನುವಾರ ನಡೆದ ಪಿಜಿ ಸಿಇಟಿ ಪರೀಕ್ಷೆ ಬರೆಯಲು ಪ್ರವೇಶ ಸಿಗದ ವಿದ್ಯಾರ್ಥಿನಿಯರಿಗೆ ಆಟೋ ಚಾಲಕರೊಬ್ಬರು ಹೊಸ ಬಟ್ಟೆ ಖರೀದಿಸಿ ಕೊಟ್ಟು ಆಪತ್ಬಾಂಧವರಾಗಿದ್ದಾರೆ.
ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಜೀನ್ಸ್ ಧರಿಸಿ ಪರೀಕ್ಷೆ ಬರೆಯಲು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡಲಿಲ್ಲ. ದೂರದ ಹಾಸ್ಟೆಲ್ ನಿಂದ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮಿ ಮತ್ತು ಕೀರ್ತನಾ ಅವರಿಗೆ ಪರೀಕ್ಷಾ ಕೇಂದ್ರದ ಒಳಗೆ ಹೋಗಲು ಸಾಧ್ಯವಾಗದೆ ಗೇಟ್ ಬಳಿ ನಿಂತಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮತ್ತು ಆಟೋ ಚಾಲಕರಾಗಿರುವ ಕೆ.ಎಂ. ಶಿವಕುಮಾರ್ ಅವರು ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಜೀನ್ಸ್ ಧರಿಸಿ ಬಂದಿರುವುದಕ್ಕೆ ಪರೀಕ್ಷೆ ಬರೆಯಲು ಪ್ರವೇಶ ನೀಡುತ್ತಿಲ್ಲ. ಇಲ್ಲಿಂದ 5 ಕಿಲೋ ಮೀಟರ್ ದೂರದಲ್ಲಿ ಹಾಸ್ಟೆಲ್ ಇದ್ದು, ಅಲ್ಲಿಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರಲು ಸಮಯವಿಲ್ಲ. ಹೊಸ ಬಟ್ಟೆಗಳನ್ನು ಖರೀದಿಸಲು ಹಣ ಕೂಡ ಇಲ್ಲ ಎಂದು ತಿಳಿಸಿದ್ದಾರೆ. ಅವರ ಅಳಲು ಆಲಿಸಿದ ಶಿವಕುಮಾರ್ ಕೂಡಲೇ ಸಮೀಪದ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆ ಖರೀದಿಸಿಕೊಟ್ಟು ಪರೀಕ್ಷಾ ಕೇಂದ್ರಕ್ಕೆ ತಂದು ಬಿಟ್ಟಿದ್ದಾರೆ.
ಪರೀಕ್ಷೆಗೆ ಜೀನ್ಸ್ ಧರಿಸಿಕೊಂಡು ಬರಬಾರದು ಎನ್ನುವ ನಿರ್ಬಂಧ ಇರಲಿಲ್ಲ. ಪರೀಕ್ಷೆ ಬರೆಯಲು ಬಂದಾಗ ಪೊಲೀಸರು ಕೇಂದ್ರದ ಒಳಗೆ ಬಿಡಲಿಲ್ಲ. ಶಿವಕುಮಾರ್ ಅವರ ನೆರವಿನಿಂದ ಪರೀಕ್ಷೆ ಬರೆಯಲು ಸಾಧ್ಯವಾಗಿದೆ. ವಸ್ತ್ರ ಸಂಹಿತೆ ಕುರಿತಾಗಿ ಮೊದಲೇ ತಿಳಿಸಿದ್ದರೆ ಅನುಕೂಲವಾಗುತ್ತಿತ್ತು ಎಂದು ವಿದ್ಯಾರ್ಥಿನಿಯರಾದ ಶ್ರೀಲಕ್ಷ್ಮಿ ಮತ್ತು ಕೀರ್ತನಾ ಹೇಳಿದ್ದಾರೆ.