ಬೆಂಗಳೂರು: ಇರಾನ್ ಹಾಗೂ ಇಸೇಲ್ ನಡುವಿನ ಯುದ್ಧಕ್ಕೆ ಇದೀಗ ಅಮೆರಿಕಾ ಕೂಡ ಎಂಟ್ರಿಕೊಟ್ಟಿದ್ದು, ಮೂರನೆ ಮಹಾಯುದ್ಧದ ಭೀತಿ ಎದುರಾಗಿದೆ. ಯುದ್ಧ ಪೀಡಿತ ಇರಾನ್ ನಿಂದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ನಿಟ್ಟಿನಲ್ಲಿ ಆಪರೇಶನ್ ಸಿಂಧು ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿನ್ನೆ 500ಕ್ಕೂ ಹೆಚ್ಚು ಭಾರತೀಯರು ಇರಾನ್ ನಿಂದ ದೆಹಲಿಗೆ ಬಂದಿಳಿದಿದ್ದರು. ಅವರಲ್ಲಿ 11 ಜನರು ಕನ್ನಡಿಗರಿದ್ದು, ಇಂದು ಕರುನಾಡಿಗೆ ಆಗಮಿಸಿದ್ದಾರೆ.
ಶನಿವಾರ ಮಧ್ಯರಾತ್ರಿ ಟೆಹ್ರಾನ್ ನಿಂದ ದೆಹಲಿಗೆ ಆಗಮಿಸಿದ್ದ 11 ಜನ ಕನ್ನಡಿಗ ವಿದ್ಯಾರ್ಥಿಗಳು ಇಂದು ದೆಹಲಿಯಿಂದ ಇಂಡಿಗೋ ವಿಮಾನ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕನ್ನಡಿಗರನ್ನು ಸರ್ಕಾರ ಹಾಗೂ ಕುಟುಂಬದವರು ಆತ್ಮೀಯವಾಗಿ ಬರಮಾಡಿಕೊಂಡಿವೆ. ವಿದ್ಯಾರ್ಥಿಗಳ ವಿಮಾನ ಪ್ರಯಾಣ ವೆಚ್ಚವನ್ನು ಕರ್ನಾಟಕ ಸರ್ಕಾರ ಭರಿಸಲಿದೆ.