ನವದೆಹಲಿ: ಖಾದ್ಯ ತೈಲ ದರ ಇಳಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
ಚಿಲ್ಲರೆ ದರವನ್ನು ಕಡಿಮೆ ಮಾಡಿ ಗ್ರಾಹಕರ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಕಳೆದ ತಿಂಗಳು ಖಾದ್ಯ ತೈಲದ ಆಮದು ಸುಂಕವನ್ನು ಶೇಕಡ 20 ರಿಂದ ಶೇಕಡ 10 ಕ್ಕೆ ಇಳಿಕೆ ಮಾಡಿದೆ. ಇದರ ಲಾಭ ಗ್ರಾಹಕರಿಗೆ ತಲುಪಿದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ದೇಶದ ಪ್ರಮುಖ ಖಾದ್ಯ ಸಂಸ್ಕರಣೆ ಘಟಕಗಳ ತಪಾಸಣೆ ಆರಂಭಿಸಲಾಗಿದೆ. ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ತಂಡಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.
ಆಮದು ಸುಂಕ ಕಡಿತದ ನಂತರ ಸೂರ್ಯಕಾಂತಿ, ಸೋಯಾಬಿನ್, ತಾಳೆ ಎಣ್ಣೆಯಂತಹ ಸಂಸ್ಕರಿಸಿದ ಎಣ್ಣೆಗಳಿಗೆ ಗರಿಷ್ಠ ಚಿಲ್ಲರೆ ದರ(MRP), ವಿತರಕರಿಗೆ ಬೆಲೆ(PTD) ಕಡಿಮೆ ಮಾಡಲು ಕಾರಣವಾಗಿದೆಯೇ ಎನ್ನುವುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಖಾದ್ಯ ತೈಲ ಕಂಪನಿಗಳು ಚಿಲ್ಲರೆ ಮತ್ತು ಸರಬರಾಜು ಮಟ್ಟದಲ್ಲಿ ಬೆಲೆ ಇಳಿಕೆ ಮಾಡಿರುವುದನ್ನು ದೃಢಪಡಿಸಿದ್ದು, ಸುಂಕ ಇಳಿಕೆಯಿಂದ ವೆಚ್ಚದ ಸಾಗಣೆಯ ಕಡಿಮೆಯಾಗಿ.ದೆ ಹೀಗಾಗಿ ಖಾದ್ಯ ತೈಲದ ಬೆಲೆಯನ್ನು ಇನ್ನಷ್ಟು ಇಳಿಕೆ ಮಾಡುವುದಾಗಿ ಕೆಲವು ಸಂಸ್ಕರಣೆ ಘಟಕಗಳು ಭರವಸೆ ನೀಡಿವೆ. ಗಗನಕೇರಿದ್ದ ಖಾದ್ಯ ತೈಲ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಅನೇಕ ಕ್ರಮ ಕೈಗೊಂಡಿದ್ದು, ಅಮದು ಸುಂಕವನ್ನು ಇಳಿಕೆ ಮಾಡಿ ಗ್ರಾಹಕರ ಹಿತಾಸಕ್ತಿ ಕಾಪಾಡಲು ಮುಂದಾಗಿದೆ.