ಬೆಂಗಳೂರು: ಕಾರ್ಮಿಕರ ಕೆಲಸದ ಅವಧಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಹಿಂದಿನಿಂದಲೂ ಇದೆ. ಕೆಲಸದ ಅವಧಿ ವಿಸ್ತರಣೆ ಬಗ್ಗೆ ನಿರ್ಧಾರವಾಗಿಲ್ಲ. ಅದಿನ್ನು ಚರ್ಚೆಯ ಹಂತದಲ್ಲಿದೆ ಅಷ್ಟೇ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕೆಲಸದ ಅವಧಿ ಹೆಚ್ಚಳ ಅನುಷ್ಠಾನದ ಬಗ್ಗೆ ಕೈಗಾರಿಕೆಗಳಿಗೆ ಯಾವುದೇ ಅನುಮತಿಯನ್ನು ಇದುವರೆಗೆ ನೀಡಿಲ್ಲ. ಕೆಲಸದ ಅವಧಿ ಹೆಚ್ಚಳ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇದೆ. ಹೀಗಾಗಿ ಹಲವು ದಿನಗಳಿಂದ ಕೈಗಾರಿಕೆಗಳ ಬೇಡಿಕೆ ಇದ್ದರೂ ಅದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಕೆಲಸದ ಅವಧಿ ಹೆಚ್ಚಳಕ್ಕೆ ಕೈಗಾರಿಕೆಗಳಿಗೆ ಅನುಮತಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ಐಟಿ ಕಂಪನಿಗಳು ಸೇರಿ ಕೆಲವು ಆಯ್ದ ಔದ್ಯೋಗಿಕ ಕ್ಷೇತ್ರಗಳಲ್ಲಿ ಕೆಲಸದ ಅವಧಿಯನ್ನು ಗರಿಷ್ಠ 9ರಿಂದ 10 ಗಂಟೆಯವರೆಗೆ ವಿಸ್ತರಿಸಲು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗೆ ವಿಸ್ತರಿಸುವ ಪ್ರಸ್ತಾವನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ. ಕಾರ್ಮಿಕರ ಸಂಘಟನೆಗಳಿಂದ ಇದಕ್ಕೆ ವಿರೋಧವಿದ್ದು, ಜೊತೆಗೆ ಐಟಿ ಸೇರಿ ಕೈಗಾರಿಕಾ ಉದ್ಯೋಗಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಇದಿನ್ನೂ ಚರ್ಚಾ ಹಂತದಲ್ಲಿದೆ ಎಂದು ಹೇಳಿದ್ದಾರೆ.