ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಅಧಿಕಾರಕ್ಕೆ ಬರುವುದೂ ಇಲ್ಲ, ಗೆಲ್ಲುವುದೂ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಡಿಕೆಶಿ ಬಳಿ ಬಟ್ಟೆ ಹೊಲಿಸಿಕೊಳ್ಳುವಷ್ಟು ದರಿದ್ರ ನನಗಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಏನು ಹೇಳಿದ್ದರು? ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರ ಬರುತ್ತದೆ, ಎಲ್ಲ ತಯಾರಾಗಿದೆ ಎಂದು ಹೇಳಿದ್ದರು. ಆಗ ಅದಕ್ಕೆ ನಾನು ಉಡುಗೊರೆ ನೀಡುತ್ತೇನೆ ಎಂದು ಹೇಳಿದ್ದೆ ಎಂದು ವ್ಯಂಗ್ಯವಾಡಿದರು.
ಗ್ರಾಮೀಣ ಭಾಗದಲ್ಲಿ ಅಲ್ಪಸಂಖ್ಯಾತ ಫಲಾನುಭವಿಗಳು ಕಡಿಮೆ ಇರುವ ಕಾರಣಕ್ಕೆ ವಸತಿ ಸಚಿವರು ಮನೆ ಹಂಚಿಕೆ ಮೀಸಲಾತಿಯನ್ನು ನಗರ ಪ್ರದೇಶಕ್ಕೆ ವರ್ಗಾವಣೆ ಮಾಡಿದ್ದಾರೆ. ನಾವು ಯಾರ ಸೌಲಭ್ಯಗಳನ್ನು ಕಿತ್ತು ಅಲ್ಪಸಂಖ್ಯಾತರಿಗೆ ನೀಡುತ್ತಿಲ್ಲ ಎಂದು ಡಿಸಿಎಂ ಸ್ಪಷ್ಟನೆ ನೀಡಿದರು.
ಸಾಚಾರ್ ವರದಿಗೆ ಅನುಗುಣವಾಗಿ ಗ್ರಾಮೀಣ ಪ್ರದೇಶಕ್ಕೂ ಶೇ 10 ರಷ್ಟು ಮೀಸಲಾತಿ ನೀಡಲಾಗುತ್ತಿತು. ಆದರೆ ಗ್ರಾಮೀಣ ಭಾಗದಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಇರುವ ಕಾರಣಕ್ಕೆ ಸೌಲಭ್ಯ ರದ್ದಾಗುತ್ತಿತ್ತು. ನಾವೇನೂ ಹೊಸದಾಗಿ ಮೀಸಲಾತಿ ಸೃಷ್ಟಿ ಮಾಡಿ ನೀಡುತ್ತಿಲ್ಲ. ಪರಿಶಿಷ್ಟ ವರ್ಗ ಮತ್ತು ಜಾತಿಗಳಲ್ಲಿ ಶೇ 90 ರಷ್ಟು ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಹೊಸದಾಗಿ ಮನೆ ಬೇಕಾಗಿರುವವರು ಅಡಿಪಾಯ ಹಾಕಿದರೆ ಮಾತ್ರ ಅವರಿಗೆ ಅನುಕೂಲ ಮಾಡಲು ಸಾಧ್ಯ. ಅಡಿಪಾಯ ಹಾಕದೆ ಹಣ ನೀಡಲು ಸಾಧ್ಯವಿಲ್ಲ ಎಂದರು.
ವಿಪಕ್ಷಗಳು ರಾಜಕೀಯ ಮಾಡುತ್ತವೆ, ಮಾಡಲಿ. ಸರ್ಕಾರ ಮನೆಗಳನ್ನು ಕಟ್ಟಿ ನಷ್ಟ ಮಾಡಿಕೊಳ್ಳಬೇಕೆ? ಪರಿಶಿಷ್ಟರಿಗೆ ಅವಕಾಶ ಮಾಡಿಕೊಡಲಾಗಿತ್ತು, ಆದರೆ ಅವರ ಕೋಟಾ ಮುಗಿದು ಹೋಯಿತು. ನಂತರ ಅದನ್ನು ಹಿಂದುಳಿದ, ಸಾಮಾನ್ಯ ವರ್ಗಗಳಿಗೆ ಬಳಸಿಕೊಂಡಿದ್ದೇವೆ. ನಮ್ಮದು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಸರ್ಕಾರ ಎಂದರು.