ಬೆಂಗಳೂರು : ಬೆಂಗಳೂರಿನಲ್ಲಿ ಅಕ್ಷಯ್ ಸಾವಿನ ಬಳಿಕ ಸರ್ಕಾರ ಅಲರ್ಟ್ ಆಗಿದೆ. ಬೆಂಗಳೂರು ನಗರದಲ್ಲಿ ಗಾಳಿ-ಮಳೆಗೆ ಮರಗಳು, ಕೊಂಬೆಗಳು ಬಿದ್ದು ಪ್ರಾಣಹಾನಿ ಮತ್ತು ಆಸ್ತಿ ಹಾನಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ, ಮಳೆಗಾಲಕ್ಕೆ ಮುನ್ನ ಅಪಾಯಕಾರಿ ವೃಕ್ಷಗಳನ್ನು ಗುರುತಿಸಿ ಅವುಗಳ ಕೊಂಬೆಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದರು.
ಇಂದು ಬೆಂಗಳೂರಿನ ಕಂಟೋನ್ಮೆಂಟ್ ಬಳಿ ರಸ್ತೆ ಬದಿಯ ಮರದ ಸುತ್ತಲಿದ್ದ ಕಾಂಕ್ರೀಟ್ ತೆರವು ಮಾಡುವ ಮೂಲಕ ವೃಕ್ಷ ಸಂರಕ್ಷಣಾ ಕಾರ್ಯಕ್ಕೆ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು. ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ ಎಂಬ 29 ವರ್ಷದ ಯುವಕ ಮೃತಪಟ್ಟು ಹೋದ ಸುದ್ದಿ ಬಹಳ ವಿಷಾದಕರ. ಈ ಕುರಿತು ಆಳವಾದ ಶೋಕವನ್ನು ವ್ಯಕ್ತಪಡಿಸುತ್ತೇನೆ.
ಟೊಳ್ಳು ಮರಗಳು ಹಾಗೂ ಬೇರುಗಳ ಸುತ್ತ ಕಾಂಕ್ರೀಟ್, ಕಲ್ಲಿನ ಚಪ್ಪಡಿ, ಟೈಲ್ಸ್ ಹಮ್ಮುವುದರಿಂದ ನೀರು ಇಳಿಯದ ಪರಿಣಾಮವಾಗಿ ಮರಗಳು ಬಿದ್ದಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತೀರ್ಪು ನೀಡಿದ್ದು, ರಾಜ್ಯ ಸರ್ಕಾರದಿಂದ ಕೂಡಾ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.