ಬೆಂಗಳೂರು: ಆಸ್ತಿಗಳ ಇ-ಖಾತೆ ದಾಖಲೆಗಳನ್ನು ಮನೆಗಳಿಗೆ ತಲುಪಿಸಲು ಉದ್ದೇಶಿಸಲಾಗಿದ್ದು, ಜುಲೈ 1 ರಿಂದ ಮನೆ ಮನೆಗೆ ಇ-ಖಾತಾ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆಸ್ತಿ ಇ-ಖಾತಾ ದಾಖಲೆಗಳನ್ನು ಆಸ್ತಿ ಮಾಲೀಕರಿಗೆ ತಲುಪಿಸಲು ಆಂದೋಲನ ರೂಪಿಸಲಾಗುತ್ತಿದೆ. ಜುಲೈನಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಕ್ಷೇತ್ರದಲ್ಲಿ ಆಂದೋಲನಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು. ಇದಕ್ಕಾಗಿ 25,000 ಆಸ್ತಿಗಳ ಖಾತಾ ದಾಖಲೆ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.
ಜುಲೈ 1 ರಿಂದ ಇಡೀ ತಿಂಗಳು ಆಸ್ತಿ ಇ- ಖಾತೆ ದಾಖಲೆ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿದ್ದು, 5 ಲಕ್ಷ ಮಂದಿ ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿದ್ದಾರೆ. ಇನ್ನೂ 20 ಲಕ್ಷ ಆಸ್ತಿಗಳ ದಾಖಲೆ ಸಿದ್ಧಪಡಿಸುವುದು ಬಾಕಿ ಇದೆ ಎಂದು ಹೇಳಿದ್ದಾರೆ.