ಬೆಳಗಾವಿ: ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟ, ಬೆಳಗಾವಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ಬೆಳಗಾವಿಯಲ್ಲಿ ಸಪ್ತ ನದಿಗಳು ತುಂಬಿ ಹರಿಯುತ್ತಿವೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಕೃಷ್ಣಾ, ವೇದಗಗಾ, ದೂದಗಗಾ ನದಿಯ ಒಳಹರಿವು ಹೆಚ್ಚಾಗಿದೆ. ಈ ಮೂರೂ ನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ಚಿಕ್ಕೋಡಿ ವಿಭಾಗದ ಆರು ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ.
ಈ 6 ಸೇತುವೆಗಳು ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ 12 ಗ್ರಾಮಗಳ ಸಪರ್ಕ ಕಡಿತಗೊಂಡಿದೆ. ಬರವಾಡ-ಕುನ್ನೂರು, ಬೋಜ-ಕಾರದಗಾ, ಭೋಜವಾಡಿ-ಕುನ್ನೂರು, ಯಡೂರು-ಕಲ್ಲೋಳ, ಭಾವನಸೌಂಡತ್ತಿ- ಮಂಜರಿ ಸೇತುವೆಗಳು ಮುಳುಗಡೆಯಾಗಿದ್ದು, ಈ ಭಾಗದ ಗ್ರಾಮಗಳ ಜನರು ಹೊರಗಿನ ಸಂಪರ್ಕವೇ ಇಲ್ಲದಂತೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಮತ್ತೊದೆಡೆ ಖಾನಾಪುರದ ಕಾಡಂಚಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮಲಪ್ರಭಾ ನದಿ ಬೋರ್ಗರೆದು ಹರಿಯುತ್ತಿದೆ. ಖಾನಾಪುರದ ಹಬ್ಬಾನಟ್ಟಿ ಗ್ರಾಮದ ಪ್ರಸಿದ್ಧ ಆಂಜನೇಯ ದೇಗುಲ ಸಂಪೂರ್ಣ ಮುಳುಗಡೆಯಾಗಿದೆ.