ಬೆಳಗಾವಿ: ಬೆಳಗಾವಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ವರುಣಾರ್ಭಟಕ್ಕೆ ಮನೆ ಗೋಡೆ ಕುಸಿದುಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಗೋಕಾಕ್ ನಲ್ಲಿ ನಡೆದಿದೆ.
ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಮಣ್ಣಿನ ಗೋಡೆ ಕುಸಿದು ಈ ದುರಂತ ಸಂಭವಿಸಿದೆ. ಫಕೀರವ್ವ ಲಕ್ಷ್ಮಣ ಹಾವೇರಿ (೬೫) ಮ್ರಿತ ಮಹಿಳೆ. ಮಣ್ಣಿನ ಅವಶೇಷಗಳಡಿ ಸಿಲುಕಿದ್ದ ಫಕೀರವ್ವ ಅವರನ್ನು ರಕ್ಷಿಸಿ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಯರಗಟ್ಟಿ ತಾಲೂಕಿನ ಚಿಕ್ಕಬದನೂರು ಗ್ರಾಮದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಚಾಲಕನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಭಾರಿ ಮಳೆಯಿಂದಾಗಿ ನದಿ- ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಆಟೋ ಚಾಲಕನೊಬ್ಬ ಹಳ್ಳದ ನೀರಿನ ರಭಸಕ್ಕೆ ಆಟೋ ಸಮೇತ ಕೊಚ್ಚಿ ಹೋಗುತ್ತಿದ್ದ. ತಕ್ಷಣ ಗಮನಿಸಿದ ಗ್ರಾಮಸ್ಥರು ಆತನನ್ನು ರಕ್ಷಿಸಿದ್ದಾರೆ.