ಬೆಂಗಳೂರು: ರಾಜ್ಯದ ಎಲ್ಲಾ ಪಡಿತರ ಚೀಟಿದಾರರ ಆಧಾರ್ ಸೀಡಿಂಗ್ ಮತ್ತು ಇ-ಕೆವೈಸಿಯನ್ನು ಜೂನ್ 30ರೊಳಗೆ ಶೇಕಡ 100ರಷ್ಟು ಪೂರ್ಣಗೊಳಿಸಬೇಕು. ಅನರ್ಹ ಪಡಿತರ ಫಲಾನುಭವಿಗಳನ್ನು ಗುರುತಿಸಿ ಅಂತಹ ಫಲಾನುಭವಿಗಳಿಗೆ ಹಂಚಿಕೆಯಾಗಿರುವ ಆಹಾರ ಧಾನ್ಯವನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಅವರು ಈ ಕುರಿತಾಗಿ ಇಲಾಖೆಯ ಎಲ್ಲಾ ಜಂಟಿ, ಉಪನಿರ್ದೇಶಕರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶನದ ಅನ್ವಯ ಪಡಿತರ ಚೀಟಿದಾರರ ಶೇಕಡ 100ರಷ್ಟು ಆಧಾರ್ ಸೀಡಿಂಗ್ ಮತ್ತು ಇ-ಕೆವೈಸಿ ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದು, ಈ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಪಡಿತರ ಫಲಾನುಭವಿಗಳು ಬಯೋಮೆಟ್ರಿಕ್ ನೀಡುವಾಗ ನಿಜವಾಗಿ ಬೆರಳಿನಲ್ಲಿರುವ ರೇಖೆಗಳು ಮುದ್ರಣವಾಗದಿದ್ದಲ್ಲಿ ಅಂತಹ ಪಡಿತರ ಫಲಾನುಭವಿಗಳ ಹೆಸರನ್ನು ಪಟ್ಟಿ ಮಾಡಿ ಅವರನ್ನು ಶೇಕಡ 2ರಷ್ಟು ಭೌತಿಕವಾಗಿ ಪರಿಶೀಲಿಸಿ ವಿನಾಯಿತಿ ನೀಡುವಂತೆ ಅಂತಹ ಫಲಾನುಭವಿಗಳು ತಪ್ಪು ಮಾಹಿತಿ ನೀಡಿದಲ್ಲಿ ಸಂಬಂಧಿಸಿದ ಜಿಲ್ಲೆಗಳ ಉಪನಿರ್ದೇಶಕರು ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಲಾಗಿದೆ.
ಅನರ್ಹ ಮಾಡಿದರ ಫಲಾನುಭವಿಗಳನ್ನು ನಿಯಮಾನುಸಾರ ಗುರುತಿಸಿ 7 ದಿನಗಳ ಒಳಗೆ ಇಲಾಖೆ ಆಯುಕ್ತರಿಗೆ ಮಾಹಿತಿ ನೀಡಬೇಕು. ಅನರ್ಹರೆಂದು ಗುರುತಿಸಿದ ಫಲಾನುಭವಿಗಳ ಆಹಾರ ಧಾನ್ಯ ಹಂಚಿಕೆ ಸ್ಥಗಿತಗೊಳಿಸಬೇಕು ಎಂದು ತಿಳಿಸಿದ್ದಾರೆ.