ಬಳ್ಳಾರಿ: ಬ್ಯಾಂಕಿಗೆ ಕಟ್ಟಬೇಕಿದ್ದ 16ಲಕ್ಷ ರೂಪಾಯಿ ಸಮೇತ ಬಳ್ಳಾರಿ ಪ್ರಾದೇಶಿಕ ಸಾರಿಗೆ ಕಚೇರಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ಬಳ್ಳಾರಿಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾರ್ವಜನಿಕರಿಂದ ಸಂಗ್ರಹವಾಗಿದ್ದ 16ಲಕ್ಷ ರೂಪಾಯಿಗಳನ್ನು ಬ್ಯಾಂಕಿಗೆ ಜಮಾ ಮಾಡದೇ ಎಸ್.ಡಿ.ಎ. ನಾಪತ್ತೆಯಾಗಿದ್ದಾರೆ. ಪ್ರಾದೇಶಿಕ ಸಾರಿಗೆ ಕಚೇರಿಯ ಖಜಾನೆ ವಿಭಾಗದ ಸಿಬ್ಬಂದಿ ರವಿ ತಾವರೆಕೆರ ಅವರು 16.72 ಲಕ್ಷ ರೂ. ಸಹಿತ ನಾಪತ್ತೆಯಾಗಿದ್ದು, ಆರ್.ಟಿ.ಒ. ಅಧಿಕಾರಿ ಶ್ರೀನಿವಾಸ ಗಿರಿ ಕೌಲ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಾರಿಗೆ ಇಲಾಖೆ ಕಚೇರಿಯಲ್ಲಿ ಸಾರ್ವಜನಿಕರಿಂದ ಸಂಗ್ರಹವಾಗುವ ಹಣವನ್ನು ಬ್ಯಾಂಕಿಗೆ ಜಮಾ ಮಾಡಬೇಕಿತ್ತು. ಮೇ 21 ಮತ್ತು 31ರವರೆಗೆ ಜಮಾ ಮಾಡಿರಲಿಲ್ಲ ನಂತರ ಜೂನ್ 1 ರಂದು ಜಮಾ ಮಾಡಲಾಗಿದ್ದು, ನಂತರದ ದಿನಗಳಲ್ಲಿ ಹಣ ಜಮಾ ಮಾಡಿರಲಿಲ್ಲ. ಇಲಾಖೆಯ ಖಾತೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ರವಿಯವರ ಮನೆಗೆ ಹೋಗಿ ಪರಿಶೀಲಿಸಿದಾಗ ಅವರು ನಾಪತ್ತೆಯಾಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.