ಚಾಮರಾಜನಗರ: ಕೃಷಿ ವಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲದ ಘಟನೆ ಚಾಮರಾಜನಗರ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದ ಚಾಮರಾಜು(25), ಆಕಾಶ್(22) ಮೃತಪಟ್ಟ ಯುವಕರು ಎಂದು ಹೇಳಲಾಗಿದೆ. ಪಿಜಿ ಪಾಳ್ಯದ ನಿವಾಸಿ ಚಾಮರಾಜು ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಆಕಾಶ್ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಭಾನುವಾರ ಸಂಬಂಧಿಕರ ಗೃಹಪ್ರವೇಶ ಇದ್ದ ಹಿನ್ನೆಲೆಯಲ್ಲಿ ಪಿಜಿ ಪಾಳ್ಯ ಗ್ರಾಮಕ್ಕೆ ಆಗಮಿಸಿದ್ದರು. ಗೃಹಪ್ರವೇಶ ಮುಗಿದ ನಂತರ ದೊಡ್ಡಪ್ಪ ಕೆಂಪರಾಜು ಅವರ ಜಮೀನಿನಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದಾರೆ. ಆದರೆ, ಮೇಲೆ ಬರಲು ಸಾಧ್ಯವಾಗದೆ ಕೂಗಿಕೊಂಡಿದ್ದು, ಇದನ್ನು ಗಮನಿಸಿದ ದೊಡ್ಡಪ್ಪ ಇಬ್ಬರನ್ನು ರಕ್ಷಿಸಲು ಪ್ರಯತ್ನ ನಡೆಸಿ ದಡಕ್ಕೆ ಎಳೆದು ತಂದಿದ್ದಾರೆ. ಆದರೆ, ಈ ವೇಳೆಗಾಗಲೇ ಇಬ್ಬರು ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಹನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.