ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ವಿ.ಸೋಮಣ್ಣ, 11 ಜನರ ಜೀವ ಬಲಿಪಡೆದು ಸರ್ಕಾರ ಪಾಪಕ್ಕೆ ಗುರಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಹೆಸರು ಬರುತ್ತೆ ಎಂದು ಆತುರವಾಗಿ ಕಾರ್ಯಕ್ರಮ ಮಾಡಿದರು. ಒಂದು ವಾರ ಬಿಟ್ಟು ಕಾರ್ಯಕ್ರಮ ಮಾಡಿದ್ದರೆ ಏನು ಆಗುತ್ತಿತ್ತು? ಈಗ ದುರಂತ ನಡೆದಿದೆ. ಪಾಪಕ್ಕೆ ಗುರಿಯಾಗಿದ್ದೀರಿ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರೇ ಯಾರು ನಿಮ್ಮ ಕಿವಿ ಕಚ್ಚಿದರು? ಇಂದೇ ಕಾರ್ಯಕ್ರಮ ಮಾಡಿ ಎಂದು? ನಿಮ್ಮ ಚಿಂತನೆ ಏನಾಯ್ತು? ಮುಗ್ಧರನ್ನು ಸಾಯಿಸಿ ಶಾಪಗ್ರಸ್ಥ ಸರ್ಕಾರವಾಗಿದೆ ಈಗ ಎಂದು ವಾಗ್ದಾಳಿ ನಡೆಸಿದರು.
ನೀವು ಮಡಿದ ತಪ್ಪಿಗೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ಕಮಿಷ್ನರ್ ದಯಾನಂದ್ ಓರ್ವ ದಕ್ಷ, ಪ್ರಾಮಾಣಿಕ ಅಧಿಕಾರಿ. ಅವರನ್ನೇ ಅಮನಾತು ಮಾಡಿದ್ದೀರಾ. ನಿಮಗೆ ಮಾನ ಮರ್ಯಾದೆ ಇದ್ದರೆ ಘಟನೆ ಬಗ್ಗೆ ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ಕೊಡಬೇಕು. ಒಳ್ಳೆಯ ಅಧಿಕಾರಿಗಳನ್ನೇ ಸಸ್ಪೆಂಡ್ ಮಾಡಿದರೆ ಅಧಿಕಾರಿಗಳಿಗೆ ನಿಮ್ಮ ಜೊತೆ ಕೆಲಸ ಮಾಡಲು ಹೇಗೆ ಸಾಧ್ಯ? ಎಂದು ಗುಡುಗಿದ್ದಾರೆ.