ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೆಳಿಗ್ಗೆ ಒಂದು ರೀತಿ, ರಾತ್ರಿ ಮತ್ತೊಂದು ರೀತಿ ಹೇಳಿಕೆ ಕೊಡುತ್ತಾರೆ. ಅವರು ಹೇಳಿಕೆ ತಿರುಚುವುದರಲ್ಲಿ ನಿಸ್ಸೀಮರು. ಹೆಚ್ ಡಿಕೆ ಹೇಳಿಕೆಯನ್ನು ಸಿರಿಯಸ್ಸಾಗಿ ತೆಗೆದುಕೊಳ್ಳಬೇಡಿ. ಕುಮಾರಸ್ವಾಮಿಯವರಿಗೆ ಇನ್ನೂ ಒತ್ತಡವಿದೆ, ಅವರಿಗೆ ಆರೋಗ್ಯ ಸರಿಯಿಲ್ಲ ಹೀಗಾಗಿ ಆ ಕಡೆ ಗಮನಹರಿಸಬೇಕು ಎಂದು ಹೇಳಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಹೆಚ್.ಡಿ,ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಕುಮಾರಸ್ವಾಮಿ, ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ತಾನೆ. ಮಂಡ್ಯ ಜನರ ಶುಭ ಹಾರೈಕೆಯಿಂದ ನನಗೆ ಏನು ಆಗುವುದಿಲ್ಲ. ನಾನು ಯಾವುದೇ ಒತ್ತಡದಲ್ಲಿಲ್ಲ, ಅವರೇ ಒತ್ತಡದಲ್ಲಿರುವುದು ಎಂದು ಟಾಂಗ್ ನೀಡಿದ್ದಾರೆ.
ಮಾತು ತಿರುಚುವುದರಲ್ಲಿ ನಿಸ್ಸೀಮ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ ಕಿಡಿಕಾರಿರುವ ಕುಮಾರಸ್ವಾಮಿ, ಆರ್ ಸಿಬಿ ಐಪಿಎಲ್ ಟ್ರೋಫಿ ಗೆದ್ದಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ಗೆದ್ರು ಅಂತಾ ಅಮಾಯಕರ ಜೀವ ತೆಗಿತಾರಾ? ಡಿ.ಕೆ.ಸುರೇಶ್ ಮಾತಿಗೆ ಅರ್ಥವಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆಗೂ ಪ್ರತಿಕ್ರಿಯಿಸಿರುವ ಹೆಚ್.ಡಿ.ಕೆ, ಡಾ.ರಾಜಕುಮಾರ್ ಸಾವಿಗೂ ಕಾಲ್ತುಳಿತ ದುರಂತಕ್ಕೂ ಯಾವುದೇ ಸಂಬಂಧವಿಲ್ಲ. ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿರುವ ಬಗ್ಗೆ ಸರ್ಕಾರ ಮಾಹಿತಿ ನೀಡಲಿಲ್ಲ. ಆಸ್ಪತ್ರೆಯಿಂದ ಬುಲೆಟಿನ್ ಹೊರಡಿಸಿದ್ದಾರೆ. 11 ಜನ ಸತ್ತಾಗ ಸರ್ಕಾರ ನಡೆದುಕೊಳ್ಳಬೇಕಾದ ರೀತಿಯಲ್ಲಿ ನಡೆದುಕೊಳ್ಳಲಿಲ್ಲ ಎಂದು ಕಿಡಿಕಾರಿದರು.
ಅಂದು ಪೊಲಿಸ್ ವ್ಯಾನ್ ಗೆ ಬೆಂಕಿ ಹಚ್ಚಿದಾಗ ಗೋಲಿಬಾರ್ ಮಾಡಿದರು. ಅಹಿತಕರ ಘಟನೆ ನಿಯಂತ್ರಿಸಲು ಸೀಮೆ ಎಣ್ಣೆ ತಂದವರಿಗೆ ಗುಂಡಿಕ್ಕಿದರು. ಹಾವೇರಿಯಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದ್ದರು. ಕಾಲ್ತುಳಿತ ದುರಂತರದಲ್ಲಿ 11 ಜನರಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಏನು? ಎಂದು ವಾಗ್ದಾಳಿ ನಡೆಸಿದರು.