ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳಲು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು. ಡಾ.ರಾಜ್ ಕುಮಾರ್ ಸಾವನ್ನಪ್ಪಿದ್ದ ವೇಳೆ ನಾಲ್ಕು ಜನರಿಗೆ ಗುಂಡು ಹೊಡೆದಿದ್ದರು. ಆಗ ಕುಮಾರಸ್ವಾಮಿ ರಾಜೀನಾಮೆ ನೀಡಿದ್ರಾ? ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ರಾಜ್ ಕುಮಾರ್ ತೀರಿಕೊಂಡಾಗ ಅಂದು ಕಂಠೀರವ ಸ್ಟುಡಿಯೋದಲ್ಲಿ ನಾನೂ ಇದ್ದೆ. ನಾಲ್ಕು ಜನರಿಗೆ ಗುಂಡು ಹೊಡೆಸಿದ್ದರು. ಆಗ ಕುಮಾರಸ್ವಾಮಿ ರಾಜೀನಾಮೆ ಕೊಟ್ರಾ? ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿದರು. ಅಂದು ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ರಾ? ಪಹಲ್ಗಾಮ್ ಉಗ್ರರ ದಾಳಿಯಲ್ಲಿ 26 ಜನರು ಸತ್ತರು. ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ ಹಲವರು ಸಾವನ್ನಪ್ಪಿದರು. ಪ್ರಧಾನಿ ಮೋದಿ, ಅಮಿತ್ ಶಾ ರಾಜೀನಾಮೆ ಕೊಟ್ರಾ? ಮೊದಲು ಅವರ ರಾಜೀನಾಮೆ ಕೊಡಿಸಲಿ. ಬಳಿಕ ನಾವೂ ಸಿಎಂ, ಡಿಸಿಎಂ ರಾಜೀನಾಮೆ ಕೊಡಿಸುತ್ತೇವೆ ಎಂದರು.
ಇಂತಹ ದುರಂತ ಆಗಬಾರದಿತ್ತು. ಆದರೆ ಆಗಿಹೋಗಿದೆ. ಅದಕ್ಕೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮವಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿಯನ್ನು ಹಿಂಪಡೆಯಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಸಿಎಂ, ಡಿಸಿಎಂ ಇಬ್ಬರೂ ಸರಿಯಾಗಿಯೇ ಕೆಲಸ ಮಾಡುತ್ತಿದ್ದಾರೆ. ಇವೆಲ್ಲ ಆಕಸ್ಮಿಕ ಘಟನೆ. ನಾವೂ ಕೂಡ ನೋವಲ್ಲಿದ್ದೇವೆ. ಅನಗತ್ಯವಾಗಿ ಗೊಂದಲ, ರಾಜಕಾರಣಗಳನ್ನು ಮಾಡಬಾರದು ಎಂದು ಹೇಳಿದರು.
ಇನ್ನು ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಸಾಲಲ್ಲ. ಕನಿಷ್ಠ ೫೦ ಲಕ್ಷ ಪರಿಹಾರವಾದರೂ ಕೊಡಬೇಕು. ನಾನೂ ಕೂಡ ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.