ಕಾಸರಗೋಡು: ತಂದೆ ಚಲಾಯಿಸುತ್ತಿದ್ದ ಕಾರಿನ ಅಡಿಗೆ ಬಿದ್ದು, ಒಂದೂವರೆ ವರ್ಷದ ಮಗುವೊಂದು ದುರಂತ ಸಾವನ್ನಪ್ಪಿರುವ ಹೃದಯ ಕಲಕುವ ಘಟನೆ ನಡೆದಿದೆ. ಮೃತಪಟ್ಟ ಕಂದಮ್ಮ ಮುಳ್ಳೇರಿಯಾ ಬೆಳ್ಳಿಗ್ಗದ ಎಂ. ಹರಿದಾಸ್ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರಿ ಹೃದ್ಯ ನಂದಾ ಎಂದು ಗುರುತಿಸಲಾಗಿದೆ.
ದುರಂತ ಘಟನೆ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಸಂಭವಿಸಿದೆ. ಹರಿದಾಸ್ ಅವರು ಸ್ಟಾರ್ಟ್ ಆಗದ ಕಾರನ್ನು ತಳ್ಳುತ್ತಿದ್ದಾಗ ಮಗು ಕಾರಿನ ಅಡಿಗೆ ಬಂದಿದೆ. ಮಗುವಿನ ತಾಯಿ ಶ್ರೀವಿದ್ಯಾ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಕುಟುಂಬವು ಸಂಬಂಧಿಕರ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಮರಳುತ್ತಿತ್ತು.
ಮುಳ್ಳೇರಿಯಾ-ಕುಂಬಳೆ KSTP ರಸ್ತೆಯಲ್ಲಿ ಬೆಳ್ಳಿಗ್ಗದ 200 ಮೀಟರ್ ಕೆಳಗೆ ಹರಿದಾಸ್ ಅವರ ಮನೆ ಇದೆ. ಅವರು ಕಾರು ಓಡಿಸಿಕೊಂಡು ಮನೆಗೆ ಬರುತ್ತಿದ್ದಾಗ, ಮಳೆ ನೀರು ಹರಿಯಲು ಮಾಡಲಾಗಿದ್ದ ಕಂದಕದಲ್ಲಿ ಕಾರಿನ ಟೈರ್ ಸಿಲುಕಿಕೊಂಡು ಎಂಜಿನ್ ನಿಂತುಹೋಗಿದೆ. ಮನೆ ಹತ್ತಿರದಲ್ಲೇ ಇದ್ದುದರಿಂದ, ಶ್ರೀವಿದ್ಯಾ ತಮ್ಮ ಕಿರಿಯ ಮಗಳನ್ನು ಕರೆದುಕೊಂಡು ಹರಿದಾಸ್ ಇದ್ದಲ್ಲಿಗೆ ನಡೆದು ಬಂದಿದ್ದಾರೆ. ಅವರ ಹಿರಿಯ ಮಗಳು ದೇವ ನಂದಾ ಕಾರಿನೊಳಗೆ ಇದ್ದಳು.
ಹರಿದಾಸ್ ಕಾರಿನಿಂದ ಇಳಿದು, ಕಾರನ್ನು ಕಂದಕದಿಂದ ಹೊರತೆಗೆಯಲು ತಳ್ಳುತ್ತಿದ್ದಾಗ, ಕಾರು ಗೋಡೆಗೆ ಅಪ್ಪಳಿಸಿ, ಮಗುವಿನ ಮೇಲೆ ಹರಿದಿದೆ. ಹಿರಿಯ ಮಗಳು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾಳೆ. ತಕ್ಷಣ ಹೃದ್ಯ ನಂದಾಳನ್ನು ಮುಳ್ಳೇರಿಯಾ ಸಹಕಾರ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಮಗು ಕೊನೆಯುಸಿರೆಳೆದಿತ್ತು. ಮಗುವಿನ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.