ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡುವಂತೆ ವಿಪಕ್ಷ ಬಿಜೆಪಿ ನಾಯಕರ ಒತ್ತಾಯಕ್ಕೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಇಷ್ಟಕ್ಕೂ ನನ್ನ ರಾಜೀನಾಮೆ ಕೇಳಲು ನನ್ನದೇನು ತಪ್ಪಿದೆ? ಬೆಂಗಳೂರು ಉಸ್ತುವಾರಿ ಸಚಿವನಾಗಿ ಸ್ಟೇಡಿಯಂ ಗೆ ಹೋಗಿದ್ದೆ, ಅದು ತಪ್ಪಾ? ಆರ್ ಸಿಬಿ ತಂಡ ಐಪಿಎಲ್ ಗೆದ್ದು ಬೆಂಗಳೂರಿಗೆ ಬಂದಾಗ ಅವರನ್ನು ಬರಮಾಡಿಕೊಳ್ಳಲು ಏರ್ ಪೋರ್ಟ್ ಗೆ ಹೋಗಿದ್ದು ತಪ್ಪಾ? ಬೆಂಗಳೂರು ಸಚಿವನಾಗಿ ಇದನ್ನು ಮಾಡಿದ್ದು ತಪ್ಪು ಎಂದು ಹೇಳುವುದು ಸರಿಯಲ್ಲ ಎಂದರು.
ಇಷ್ಟಕ್ಕು ರಾಜೀನಾಮೆ ಕೊಡಲು ನಾನೇನು ಕ್ರೈಂ ಮಾಡಿದ್ದೇನಾ? ರಾಜಕೀಯಕ್ಕಾಗಿ ಹೆಣದ ಮೇಲೆ ರಾಜಕಾರಣ ಮಾಡುವುದು ಸರಿಯಲ್ಲ. ಬಿಜೆಪಿಯವರು ಎಲ್ಲದಕ್ಕೂ ಯಾಕೆ ನನ್ನನ್ನೇ ಟಾರ್ಗೆಟ್ ಮಾಡುತ್ತಾರೆ ಎಂದರೆ ಅವರಿಗೆ ನನ್ನ ಕಂಡರೆ ಭಾರಿ ಪ್ರೀತಿ. ಅವರ ಆಡಳಿತದ ಅವಧಿಯಲ್ಲಿ ಏನೆಲ್ಲಾ ಆಗಿದೆ? ಯಾರೆಲ್ಲ ಯಾವಾಗ ರಾಜೀನಾಮೆ ನೀಡಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಈ ಬಗ್ಗೆ ಚರ್ಚೆಯಾಗಲಿ ಆಗ ಮಾತನಾಡುತ್ತೇನೆ . ರಾಜೀನಾಮೆ ಕೊಡಬೇಕಾ ಕೊಡೋಣ ಎಂದು ಕಿಡಿಕಾರಿದ್ದಾರೆ.