ಚಿಕ್ಕಬಳ್ಳಾಪುರ: ಹೊಲದಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ನಡೆದಿದೆ.
ನಾಲ್ಕು ವರ್ಷದ ಅರ್ಪಿತ್ ರೆಡ್ಡಿ ಮೃತ ಮಗು. ನರಸಿಂಹಮೂರ್ತಿ ಹಾಗೂ ಭಾಗ್ಯಮ್ಮ ದಂಪತಿಯ ಮಗ. ದಂಪತಿ ಮದುವೆಯಾಗಿ 14 ವರ್ಷಗಳ ಬಳಿಕ ಅರ್ಪಿತ್ ರೆಡ್ಡಿ ಹುಟ್ಟಿದ್ದ. ಇದೀಗ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದು, ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಲಗುಮೇನಹಳ್ಳಿಯ ಜಮೀನಿನಲ್ಲಿ ಜೋಳ ಬಿತ್ತನೆ ಮಾಡಲು ದಂಪತಿ ಹೋಗಿದ್ದ ವೇಳೆ ಮಗುವನ್ನು ಕರೆದೊಯ್ದಿದ್ದರು. ಹೊಲದಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿ ನೀರಿನ ಹೊಂಡಕ್ಕೆ ಬಿದ್ದು ದುರಂತ ಸಂಭವಿಸಿದೆ.