ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ರಾಯಭಾರಿಯನ್ನಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದಕ್ಕೆ ಕನ್ನಡಿಗರು, ಕನ್ನಡ ಚಿತ್ರರಂಗದ ತಾರೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸಚಿವ ಎಂ.ಬಿ.ಪಾಟೀಲ್ ತಮನ್ನಾ ನೇಮಕ ಸಮರ್ಥಿಸಿಕೊಂಡಿದ್ದು, ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.
ತಮನ್ನಾ ಭಾಟಿಯಾ ಅವರಿಗೆ 6.20 ಕೋಟಿ ನೀಡಿ ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿರುವುದರ ಬಗ್ಗೆ ಸಮರ್ಥಿಸಿಕೊಂಡಿರುವ ಸಚಿವ ಎಂ.ಬಿ.ಪಾಟೀಲ್, ‘ಕರ್ನಾಟಕದೊಳಗೆ ಈಗಾಗಲೇ ಮೈಸೂರು ಸ್ಯಾಂಡಲ್ ಸೋಪ್ ಬಹಳ ಜನಪ್ರಿಯವಾಗಿದೆ.ಆದರೆ ಹೊರ ರಾಜ್ಯಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ನ್ನು ಇನ್ನಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ಕನ್ನಡ ಚಿತ್ರೋದ್ಯಮದ ಬಗ್ಗೆ KSDL ಅಪಾರ ಗೌರವ ಹೊಂದಿದೆ.ಈಗಾಗಲೇ ಕನ್ನಡದ ಹಲವು ಚಿತ್ರಗಳು ಬಾಲಿವುಡ್ ಗೆ ಸ್ಪರ್ಧೆ ಒಡ್ದಿರುವುದು ನಿಮಗೆ ತಿಳಿದಿದೆ. ಆದಾಗ್ಯೂ ಕರ್ನಾಟಕದ ಆಚೆಗೂ ನಮ್ಮ ಉತ್ಪನ್ನ ಬೆಳೆಯಬೇಕಾಗಿರುವುದರಿಂದ ಹಾಗೂ 2028ರೊಳಗೆ KSDLನ ವಾರ್ಷಿಕ ಆದಾಯ 5 ಸಾವಿರ ಕೋಟಿ ಮೀರುವ ಗುರಿ ಇದೆ.
ಇದೊಂದು ಸಾರ್ವಜನಿಕ ವಲಯ ಉದ್ಯಮದ ಸ್ವತಂತ್ರ ನಿರ್ಧರವಾಗಿದ್ದು ಹಲವು ಮಾರುಕಟ್ಟೆ ಪರಿಣಿತರ ಜೊತೆ ಸಮಾಲೋಚಿಸಿಯೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದಾಚೆಗೂ ಮಾರುಕಟ್ಟೆ ವಿಸ್ತರಣೆಗೆ ಪ್ರಚಾರ ರಾಯಭಾರಿಯನ್ನಾಗಿಸಲು ಕೆಲವು ಮಾನದಂಡಗಳನ್ನು ನಮ್ಮ ಮಾರುಕಟ್ಟೆ ಪರಿಣಿತರು ಗುರುತಿಸಿದ್ದಾರೆ. ಆಯ್ಕೆ ಮಾಡಿರುವ ಪ್ರಚಾರ ರಾಯಭಾರಿ ನಿಗದಿತ ಸಮಯದಲ್ಲಿ ಬೇರೆ ಉತ್ಪನ್ನದ ಜೊತೆ ಗುರುತಿಸಿಕೊಳ್ಳದೇ ಇರುವುದು, ನಮ್ಮ ಉತ್ಪನ್ನದ ಬಳಕೆದಾರರು ಆಗುವಂತವರಿಗೆ (ಟಾರ್ಗೆಟ್ ಆಡಿಯನ್ಸ್) ಹೆಚ್ಚು ಇಷ್ಟಪಡುವ ನಟಿಯನ್ನು ಆಯ್ಕೆ ಮಾಡುವುದು, ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಫಾಲೋವರ್ ಗಳನ್ನು ಹೊಂದಿರುವಂತವರನ್ನು ಹಾಗೂ ವ್ಯಾಪಕವಾದ ಮಾರುಕಟ್ಟೆ ಉತ್ಪನ್ನಕ್ಕೆ ಸೂಕ್ತ ಆಗುವವರನ್ನು ಗುರುತಿಸಿದ್ದಾರೆ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.