ಮಡಿಕೇರಿ: ಕೊಡಗು ಜಿಲ್ಲೆ ಸುಂಟಿಕೊಪ್ಪದಲ್ಲಿ ಮಫ್ತಿಯಲ್ಲಿ ಬಂದು ಲಾಂಗ್ ತೋರಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐ ಮತ್ತು ಎಎಸ್ಐ ಅವರನ್ನು ಅಮಾನತು ಮಾಡಲಾಗಿದೆ.
ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಗದೀಶ್, ಎಎಸ್ಐ ತೀರ್ಥಕುಮಾರ್ ಅಮಾನತುಗೊಂಡವರು. ಸುಂಟಿಕೊಪ್ಪ ಸಮೀಪ ಗರಂಗಂದೂರು ಗ್ರಾಮದಲ್ಲಿ ತೆರೆ ಮಹೋತ್ಸವ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂಟು ಸ್ನೇಹಿತರು ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಹರದೂರು ಬಸ್ ಶೆಲ್ಟರ್ ನಲ್ಲಿ ಇದ್ದ ಸಂದರ್ಭದಲ್ಲಿ ಅಲ್ಲಿಗೆ ಮಫ್ತಿಯಲ್ಲಿ ಬಂದ ಪೊಲೀಸರು ಬೆದರಿಸಿದ್ದಾರೆ.
ಇಸ್ಪೀಟ್ ಆಡುತ್ತಿದ್ದೀರಾ ಎಂದು ಪ್ರಶ್ನಿಸಿ ಲಾಂಗ್ ತೋರಿಸಿ ಬೆದರಿಸಿದ್ದಲ್ಲದೇ ಯುವಕರಿಂದ ಬೈಕ್ ಕೀ, ಮೊಬೈಲ್ ಪಡೆದುಕೊಂಡು ಮರುದಿನ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಮರುದಿನ ಸಂಜೆ ಠಾಣೆಗೆ ಹೋದಾಗ ಮೂರು ಸಾವಿರ ರೂಪಾಯಿ ಪಡೆದು ಮೊಬೈಲ್ ಹಾಗೂ ಬೈಕ್ ಕೀ ಕೊಟ್ಟಿದ್ದಾರೆ. ಖಾಲಿ ಪತ್ರದಲ್ಲಿ ಸಹಿ ಮಾಡಿಸಿಕೊಂಡು ಕಳುಹಿಸಿದ್ದಾರೆ. ತಪ್ಪು ಮಾಡದೆ ಇದ್ದರೂ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದು ಶಂಕಾಸ್ಪದವಾಗಿದ್ದ ಕಾರಣ ಯುವಕರು ನೇರವಾಗಿ ಜಿಲ್ಲಾ ಪೊಲೀಸ್ ಅಧಿಕಾರಿನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಎಸ್ಪಿ ತನಿಖೆಗೆ ಆದೇಶಿಸಿದ್ದು, ತೀರ್ಥಕುಮಾರ್ ದೂರವಾಣಿ ಮೂಲಕ ನಡೆದ ಘಟನೆ ಹಾಗೂ ಪಡೆದುಕೊಂಡ ಹಣದ ಬಗ್ಗೆ ಮಾತನಾಡಿರುವ ಆಡಿಯೋ ಇದ್ದು, ತನಿಖಾಧಿಕಾರಿ ನೀಡಿದ ವರದಿ ಅನ್ವಯ ಇನ್ಸ್ಪೆಕ್ಟರ್ ಜಗದೀಶ್ ಮತ್ತು ಎಎಸ್ಐ ತೀರ್ಥಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.