ತನ್ನನ್ನು ಡುಮ್ಮ ಎಂದು ಕರೆದಿದ್ದಕ್ಕೆ ಯುವಕನೊಬ್ಬ ಇಬ್ಬರನ್ನು ಗುಂಡಿಟ್ಟು ಹತ್ಯೆಗೈಯ್ಯಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ.
ಏಲ್ ಘಾಟ್ ಪ್ರದೇಶದ ನಿವಾಸಿ ಅರ್ಜುನ್ ಚೌಹಾಣ್ ಎಂಬ ಯುವಕ ಈ ಕೃತ್ಯವೆಸಗಿದ್ದಾನೆ. ಅರ್ಜುನ್ ತನ್ನ ಚಿಕ್ಕಪ್ಪನೊಂದಿಗೆ ದೇವಸ್ಥಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋಗಿದ್ದ. ಈ ವೇಳೆ ಅನಿಲ್ ಚೌಹಾಣ್ ಹಾಗೂ ಶುಭಮ್ ಚೌಹಾಣ್ ಎಂಬ ಇಬ್ಬರು, ಅರ್ಜುನ್ ನನ್ನು ಡುಮ್ಮ ಎಂದು ರೇಗಿಸಿದ್ದಾರೆ. ಇದರಿಂದ ಕೋಪಗೊಮ್ದ ಅರ್ಜುನ್ ತನ್ನ ಸ್ನೇಹಿತ ಆಸೀಫ್ ಖಾನ್ ಎಂಬಾತನ ಜೊತೆ ಅವರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾನೆ.
ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಗೋರಖ್ ಪುರದ ಟೋಲ್ ಪ್ಲಾಜಾಬಳಿ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ದೂರಿನ ಹಿನ್ನೆಲೆಯಲ್ಲಿ ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಆರ್ಪಿಯನ್ನು ಬಂಧಿಸಿದ್ದಾರೆ.