ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧಾಗೆ ಹೈಕೋರ್ಟ್ ರಿಲೀಫ್ ನೀಡಿದೆ.
ಪ್ರಕರಣ ಸಂಬಂಧ ಅನುರಾಧಾ ರೈ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ರದ್ದು ಕೋರಿ ಅನುರಾಧಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ವೇಳೆ ಅನುರಾಧ ಪರ ವಕೀಲ ವೆಂಕಟೇಶ್ ಅರಬಟ್ಟಿ, ವಿನಾಕಾರಣ ಪ್ರಕರಣದಲ್ಲಿ ಅನುರಾಧಾ ರೈ ಹೆಸರು ತಂದಿದ್ದಾರೆ. ಆಸ್ತಿ ವಿವಾದ 6 ತಿಂಗಳ ಹಿಂದೆಯೇ ಇತ್ಯರ್ಥವಾಗಿದೆ. ಏ.14ರಂದೇ ಅನುರಾಧಾ ರೈ ಪುತ್ರಿಯೊಂದಿಗೆ ಯುರೋಪ್ ಗೆ ತೆರಳಿದ್ದಾರೆ. ಕೊಲೆಯತ್ನ ಕೇಸ್ ಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ವಾದ ಮಂಡಿಸಿದ್ದಾರೆ.
ಈ ವೇಳೆ ಹೈಕೋರ್ಟ್ ಅನುರಾಧಾ ರೈ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ. ಈ ಮೂಲಕ ಸದ್ಯಕ್ಕೆ ಅನುರಾಧಾಗೆ ರಿಲೀಫ್ ಸಿಕ್ಕಂತಾಗಿದೆ.