ವಿಶ್ವವಿದ್ಯಾಲಯ ಧನ ಆಯೋಗದ (ಯುಜಿಸಿ) ಅಧ್ಯಕ್ಷರಾಗಿದ್ದ ಪ್ರೊ. ಮಾಮಿದಾಲ ಜಗದೀಶ್ ಕುಮಾರ್ ತಮ್ಮ ಹುದ್ದೆಯಿಂದ ಅಧಿಕೃತವಾಗಿ ನಿವೃತ್ತರಾಗಿದ್ದಾರೆ. ಫೆಬ್ರವರಿ 2022 ರಿಂದ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಅವರಿಗೆ ಆಯೋಗವು ಕೃತಜ್ಞತೆ ಸಲ್ಲಿಸಿದ್ದು, ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಯುಜಿಸಿ, “ಅಧ್ಯಕ್ಷರಾದ ಪ್ರೊ. ಮಾಮಿದಾಲ ಜಗದೀಶ್ ಕುಮಾರ್ ಅವರಿಗೆ ಯುಜಿಸಿ ಹೃದಯಪೂರ್ವಕ ಬೀಳ್ಕೊಡುಗೆ ನೀಡುತ್ತದೆ. ಅವರ ಅಧಿಕಾರಾವಧಿಯು ಅಭೂತಪೂರ್ವ ವಿದ್ಯಾರ್ಥಿ ಕೇಂದ್ರಿತ ಸುಧಾರಣೆಗಳು ಮತ್ತು ದೇಶದ ಉನ್ನತ ಶಿಕ್ಷಣದಲ್ಲಿ ದೂರಗಾಮಿ ಸಾಂಸ್ಥಿಕ ಬದಲಾವಣೆಗಳಿಗೆ ಸಾಕ್ಷಿಯಾಯಿತು. ನಿಯಂತ್ರಕ ಸಂಸ್ಥೆಯ ಕಾರ್ಯನಿರ್ವಹಣೆಯ ಹಲವು ಅಂಶಗಳನ್ನು ಅವರು ಬದಲಾಯಿಸಿದರು,” ಎಂದು ಶ್ಲಾಘಿಸಿದೆ.
“ಅವರ ಶೈಕ್ಷಣಿಕ ಬದ್ಧತೆ ಮತ್ತು ಎಲ್ಲಾ ಸ್ತರದ ಜನರೊಂದಿಗೆ ಬೆರೆಯುವ ಅವರ ಸಾಮರ್ಥ್ಯವು ಸದಾ ನೆನಪಿನಲ್ಲಿ ಉಳಿಯುತ್ತದೆ. ಯುಜಿಸಿ ಕುಟುಂಬವು ಅವರಿಗೆ ಮುಂದಿನ ಜೀವನದಲ್ಲಿ ಯಶಸ್ಸನ್ನು ಹಾರೈಸುತ್ತದೆ,” ಎಂದು ಆಯೋಗವು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯವರಾದ ಕುಮಾರ್ ಅವರು ಐಐಟಿ ಮದ್ರಾಸ್ನಿಂದ ಎಂಎಸ್ ಮತ್ತು ಪಿಎಚ್ಡಿ ಪದವಿಗಳನ್ನು ಪಡೆದಿದ್ದಾರೆ. ಜನವರಿ 2016 ರಿಂದ ಫೆಬ್ರವರಿ 2022 ರವರೆಗೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) 12 ನೇ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಅಧಿಕೃತ ವೆಬ್ಸೈಟ್ ಪ್ರಕಾರ, ಅವರು ನೆದರ್ಲ್ಯಾಂಡ್ನ ಫಿಲಿಪ್ಸ್ ಸೆಮಿಕಂಡಕ್ಟರ್ಸ್ನಿಂದ ಐಐಟಿ ದೆಹಲಿಯಲ್ಲಿ ಸ್ಥಾಪಿಸಲಾದ ಎನ್ಎಕ್ಸ್ಪಿ (ಫಿಲಿಪ್ಸ್) ಪ್ರಾಧ್ಯಾಪಕ ಹುದ್ದೆಯನ್ನು ಅಲಂಕರಿಸಿದ್ದರು. ಐಐಟಿ ದೆಹಲಿಯಿಂದ 2013 ರ ಶ್ರೇಷ್ಠ ಬೋಧನಾ ಪ್ರಶಸ್ತಿಯನ್ನು (ದೊಡ್ಡ ತರಗತಿ ವಿಭಾಗದಲ್ಲಿ) ಅವರು ಪಡೆದಿದ್ದಾರೆ.
ಅವರು ನ್ಯಾನೊಎಲೆಕ್ಟ್ರಾನಿಕ್ ಸಾಧನಗಳು, ನ್ಯಾನೊಸ್ಕೇಲ್ ಸಾಧನಗಳ ಮಾದರಿ ಮತ್ತು ಸಿಮ್ಯುಲೇಶನ್, ನವೀನ ಸಾಧನ ವಿನ್ಯಾಸ ಮತ್ತು ಪವರ್ ಸೆಮಿಕಂಡಕ್ಟರ್ ಸಾಧನಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರೊ. ಕುಮಾರ್ ಅವರು ಈ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಪ್ರಕಟಣೆಗಳನ್ನು ಹೊಂದಿದ್ದು, ಮೂರು ಪುಸ್ತಕಗಳು, ನಾಲ್ಕು ಪುಸ್ತಕ ಅಧ್ಯಾಯಗಳು ಮತ್ತು 250 ಕ್ಕೂ ಹೆಚ್ಚು ಉಲ್ಲೇಖಿತ ಜರ್ನಲ್ಗಳು ಮತ್ತು ಕಾನ್ಫರೆನ್ಸ್ಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರ ಸಂಶೋಧನೆಯ ಆಧಾರದ ಮೇಲೆ ಹಲವಾರು ಪೇಟೆಂಟ್ ಅರ್ಜಿಗಳನ್ನು ಸಲ್ಲಿಸಲಾಗಿದೆ.
Farewell to Prof. M. Jagadesh Kumar 🌟
— UGC INDIA (@ugc_india) April 7, 2025
The University Grants Commission bids a heartfelt farewell to Chairman Prof. M. Jagadesh Kumar (@mamidala90).
His tenure was marked by a series of unprecedented student-centric reforms and far-reaching institutional changes across the… pic.twitter.com/3wxxOtjIlI