
ಮಂಡ್ಯ: ಸರಗಳ್ಳತನ, ಮನೆ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ.
ಮಂಡ್ಯ ಜಿಲ್ಲೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಸಾಹಸ ಕಲಾವಿದ ಶೃಂಗಾರ್(25) ಕನ್ನಲಿ ಗ್ರಾಮದ ಚೇತನ್(25) ಹಾಗೂ ರಾಮನಗರ ಮೂಲದ ಪ್ರಸನ್ನ ಅವರನ್ನು ಬಂಧಿಸಲಾಗಿದೆ
ಬಂಧಿತರ ಬಳಿ ಇದ್ದ 42 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಮೋಜು, ಮಸ್ತಿಗಾಗಿ ಸರಗಳ್ಳತನ ಮನೆಗಳ್ಳತನ ಮಾಡುತ್ತಿದ್ದರು ಎಂದು ಹೇಳಲಾಗಿದೆ
ಬಂಧಿತ ಶೃಂಗಾರ್ ಮತ್ತು ಚೇತನ್ ಇಬ್ಬರು ಕ್ಲಾಸ್ಮೇಟ್ ಗಳಾಗಿದ್ದಾರೆ. ಮೋಜು, ಮಸ್ತಿಗಾಗಿ ಅಡ್ಡದಾರಿ ಹಿಡಿದಿದ್ದ ಇವರು ಮನೆ, ಸರ ಕಳವು ಮಾಡುತ್ತಿದ್ದರು. ಈ ಹಿಂದೆ ಶೃಂಗಾರ್ ಮೈಸೂರಿನಲ್ಲಿ ಜಿಮ್ ನಡೆಸುತ್ತಿದ್ದ. ಚಿತ್ರವೊಂದಕ್ಕೆ ಶೃಂಗಾರ್ ಸಾಹಸ ಕಲಾವಿದನಾಗಿ ಕೆಲಸ ಮಾಡಿದ್ದಾನೆ. ಆರೋಪಿ ಜಿಮ್ ನಲ್ಲಿ ಲಾಸ್ ಆಗಿದ್ದರಿಂದ ಸರಗಳ್ಳತನಕ್ಕೆ ಇಳಿದಿದ್ದ. ಸ್ನೇಹಿತರ ಜೊತೆ ಸೇರಿ ಚಿನ್ನದ ಸರ ಕದ್ದು ಪರಾರಿ ಆಗುತ್ತಿದ್ದ.
ಫೆ. 9 ರಂದು ಪ್ರೇಮಾ ಎಂಬುವರ 80 ಗ್ರಾಂ ತೂಕದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದರು. ಆರೋಪಿಗಳ ಬಂಧನದ ನಂತರ ಎಂಟು ಸರಗಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ಮತ್ತೊಂದು ಕಡೆ ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿ ಪ್ರಸನ್ನ ಎಂಬುವನನ್ನು ಬಂಧಿಸಲಾಗಿದೆ. ರಾಮನಗರದಿಂದ ಮಂಡ್ಯಕ್ಕೆ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಬಂಧಿತ ಆರೋಪಿ ಪ್ರಸನ್ನನಿಂದ 179 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.