
ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಸರ್ ಶಾ ಸುಲೈಮಾನ್ ಹಾಲ್ನಲ್ಲಿ ಭಾನುವಾರ ಮಧ್ಯಾಹ್ನ ಊಟಕ್ಕೆ ‘ಬೀಫ್ ಬಿರಿಯಾನಿ’ ಬಡಿಸುವ ನೋಟೀಸ್ ಒಂದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ನೋಟೀಸ್ ವೈರಲ್ ಆಗುತ್ತಿದ್ದಂತೆ ವಿವಾದ ಭುಗಿಲೆದ್ದಿದೆ.
ಈ ನೋಟೀಸ್ನಲ್ಲಿ, “ಭಾನುವಾರದ ಊಟದ ಮೆನುವನ್ನು ಬದಲಾಯಿಸಲಾಗಿದೆ ಮತ್ತು ಬೇಡಿಕೆಯಂತೆ ಚಿಕನ್ ಬಿರಿಯಾನಿ ಬದಲಿಗೆ ಬೀಫ್ ಬಿರಿಯಾನಿಯನ್ನು ನೀಡಲಾಗುವುದು” ಎಂದು ಬರೆಯಲಾಗಿತ್ತು. ನೋಟೀಸ್ನಿಂದ ವಿವಿ ಕ್ಯಾಂಪಸ್ನಲ್ಲಿ ಗದ್ದಲ ಉಂಟಾದ ಹಿನ್ನೆಲೆಯಲ್ಲಿ, ಎಎಂಯು ಆಡಳಿತವು “ಟೈಪಿಂಗ್ ದೋಷ”ದಿಂದ ಹೀಗಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ ಮತ್ತು ಇದಕ್ಕೆ ಕಾರಣರಾದವರಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದೆ.
ಸರ್ ಶಾ ಸುಲೈಮಾನ್ ಹಾಲ್ನ ವಿದ್ಯಾರ್ಥಿಗಳು ಈ ನೋಟೀಸ್ ಅನ್ನು ಕಂಡುಕೊಂಡ ನಂತರ ಅದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿತು. ಆರಂಭದಲ್ಲಿ, ಎಎಂಯು ಆಡಳಿತವು ಯಾವುದೇ ಹೇಳಿಕೆಯನ್ನು ನೀಡಲು ಹಿಂಜರಿದಿದ್ದು ಆದರೆ, ವಿಷಯವು ಉಲ್ಬಣಗೊಂಡಂತೆ ಅಂತರ ಕಾಯ್ದುಕೊಂಡು ಇದು ಅನಪೇಕ್ಷಿತ ಎಂದು ತಿಳಿಸಿದೆ.
“ವಿಷಯವು ನಮ್ಮ ಗಮನಕ್ಕೆ ಬಂದಿದೆ. ಇದು ಆಹಾರ ಮೆನುವಿಗೆ ಸಂಬಂಧಿಸಿದ ನೋಟೀಸ್ ಎಂದು ನಾವು ಕಂಡುಕೊಂಡಿದ್ದೇವೆ. ಆದಾಗ್ಯೂ, ಇದು ಸ್ಪಷ್ಟವಾದ ಟೈಪಿಂಗ್ ದೋಷವನ್ನು ಒಳಗೊಂಡಿತ್ತು. ಯಾವುದೇ ಅಧಿಕೃತ ಸಹಿ ಇಲ್ಲದ ಕಾರಣ ಅದರ ಸತ್ಯಾಸತ್ಯತೆ ಬಗ್ಗೆ ಅನುಮಾನಗಳಿದ್ದು, ಇದನ್ನು ತಕ್ಷಣವೇ ಹಿಂಪಡೆಯಲಾಯಿತು. ಇದಕ್ಕೆ ಕಾರಣರಾದ ಇಬ್ಬರು ಹಿರಿಯ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ. ವಿಶ್ವವಿದ್ಯಾನಿಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ” ಎಂದು ಹೇಳಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮತ್ತು ಎಎಂಯು ಹಳೇ ವಿದ್ಯಾರ್ಥಿ ನಿಶಿತ್ ಶರ್ಮಾ, ವಿಶ್ವವಿದ್ಯಾನಿಲಯವು ವಿಷಯವನ್ನು ನಿರ್ವಹಿಸಿದ ರೀತಿಯನ್ನು ಟೀಕಿಸಿದ್ದಾರೆ. “ಈ ವಿಷಯದಲ್ಲಿ ಆಡಳಿತದ ಪಾತ್ರ ನಾಚಿಕೆಗೇಡಿತನದ್ದು. ಸರ್ ಶಾ ಸುಲೈಮಾನ್ ಹಾಲ್ನಲ್ಲಿ ಅಂಟಿಸಿದ್ದ ನೋಟಿಸ್ ನಲ್ಲಿ, ಚಿಕನ್ ಬಿರಿಯಾನಿ ಬದಲಿಗೆ ಬೀಫ್ ಬಿರಿಯಾನಿಯನ್ನು ನೀಡಲಾಗುವುದು ಎಂದು ಹೇಳಲಾಗಿತ್ತು. ಇಂತಹ ಕ್ರಮಗಳು ಆಡಳಿತವು ಮೂಲಭೂತವಾದಿ ಅಂಶಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ವಿದ್ಯಾರ್ಥಿಗಳ ದುರ್ವರ್ತನೆಯನ್ನು ಮುಚ್ಚಿಹಾಕುತ್ತಿದೆ ಎಂದು ಸೂಚಿಸುತ್ತದೆ” ಎಂದು ಶರ್ಮಾ ಆರೋಪಿಸಿದ್ದಾರೆ.