
ಬೆಳಗಾವಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೆ, ಇನ್ನು ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಮುಂದುವರೆದಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಪ್ತ ನದಿಗಳ ಅಬ್ಬರಕ್ಕೆ ಪ್ರವಾಹವುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಪ್ರವಾಹದ ನಡುವೆ ಬೈಲಹೊಂಗಲದ ಗ್ರಾಮಗಳಿಗೆ ಮೊಸಳೆ ಭೀತಿ ಶುರುವಾಗಿದೆ. ಬೆಳಗಾವಿಯ ಬೈಲಹೊಂಗಲ ತಾಲೂಕಿನ ಮಾಟೋಳ್ಳಿ ಗ್ರಾಮದಲ್ಲಿ ಮಲಪ್ರಭಾ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದ್ದು, ಈನಡುವೆ ಗ್ರಾಮಕ್ಕೆ ಬೃಹತ್ ಮೊಸಳೆ ಎಂಟ್ರಿ ಕೊಟ್ಟಿದೆ.
ನದಿ ತಟದಲ್ಲಿ ಸುಮಾರು 10 ಅಡಿ ಉದ್ದದ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ನಾಲ್ಕು ದಿನಗಳ ಹಿಂದೆ ಇದೇ ಮೊಸಳೆ ವೇದಗಂಗಾ ನದಿಯಲ್ಲಿ ಕಾಣಿಸಿಕೊಂಡಿತ್ತು. ಈಗ ಮಲಪ್ರಭಾ ನದಿ ತೀರದಲ್ಲಿ ಕಾಣಿಸಿಕೊಂಡಿದೆ.