ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಜಾರಿಗೊಳಿಸಿದ್ದರಿಂದ ಮದ್ಯದಂಗಡಿಗಳು ಈವರೆಗೆ ಬಂದ್ ಆಗಿದ್ದು ಮದ್ಯಪ್ರಿಯರು ಚಡಪಡಿಸಿ ಹೋಗಿದ್ದರು. ಮೂರನೇ ಹಂತದ ಲಾಕ್ ಡೌನ್ ಘೋಷಣೆ ಸಂದರ್ಭದಲ್ಲಿ ಮದ್ಯದಂಗಡಿ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಖರೀದಿಗಾಗಿ ಮದ್ಯಪ್ರಿಯರು ಮುಗಿಬಿದ್ದಿದ್ದಾರೆ.
ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಒಂದು ಕಾಲದ ಸ್ಟಾರ್ ಕ್ರಿಕೆಟರ್, ಹಾಲಿ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ, ನಾನೂ ಕೂಡ ಬಿಯರ್ ಖರೀದಿಗಾಗಿ ಮದ್ಯದಂಗಡಿಗೆ ಹೋಗುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮ್ಮ ಬಿಯರ್ ಮೇಲಿನ ಪ್ರೀತಿಯನ್ನು ರವಿಶಾಸ್ತ್ರಿ ತೋರ್ಪಡಿಸಿಕೊಂಡಿದ್ದಾರೆ.
ರವಿಶಾಸ್ತ್ರಿ ಮುಂಬೈನ ಅಲಿಬಾಗ್ ನಲ್ಲಿ ವಾಸಿಸುತ್ತಿದ್ದು, ಈವರೆಗೆ ಈ ಪ್ರದೇಶ ರೆಡ್ ಝೋನ್ ನಲ್ಲಿತ್ತು. ಇದೀಗ ಇಲ್ಲಿ ಕರೋನಾ ಸೋಂಕು ಕಡಿಮೆಯಾಗಿರುವ ಕಾರಣ ಆರೆಂಜ್ ಝೋನ್ ಗೆ ಬಂದಿದೆ. ಹೀಗಾಗಿ ಮದ್ಯದಂಗಡಿಗಳು ತೆರೆದಿದ್ದು, ಸಾಕಾಗುವಷ್ಟು ಬಿಯರ್ ಖರೀದಿಸಲು ರವಿಶಾಸ್ತ್ರಿ ಮುಂದಾಗಿದ್ದಾರೆ.