ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಚೇತರಿಕೆ ಕಾಣುವ ಮೊದಲ ಲಕ್ಷಣಗಳನ್ನು ಜಾಗತಿಕ ಸಮುದಾಯ ತೋರುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಅಖಿಲ ಭಾರತ ಮ್ಯಾನೇಜ್ಮೆಂಟ್ ಸಂಘಟನೆಯ (ಎಐಎಂಎ) 48ನೇ ವರ್ಷೋತ್ಸವದ ಸಂದರ್ಭದಲ್ಲಿ ಮಾತನಾಡಿದ ದಾಸ್, ಸಾಂಕ್ರಾಮಿಕದಿಂದ ಜಾಗತಿಕ ಆರ್ಥಿಕತೆಗೆ ರಚನಾತ್ಮಕ ಬದಲಾವಣೆಗಳು ಬಂದಿದ್ದು, ಬಡವರಿಗೆ ಹೆಚ್ಚಿನ ಪೆಟ್ಟು ಬಿದ್ದಿದೆ ಎಂದಿದ್ದಾರೆ.
ರೆಪೊ ದರದಲ್ಲಿ ಬದಲಾವಣೆ ಮಾಡದ RBI
“ಕೋವಿಡ್ ಸಾಂಕ್ರಾಮಿಕದಿಂದಾಗಿ ತಂತ್ರಜ್ಞಾನಾಧರಿತ ವ್ಯವಸ್ಥೆಗಳಿಗೆ ಒಗ್ಗಿಕೊಳ್ಳಲು ಆರ್ಥಿಕತೆ, ಶಿಕ್ಷಣ, ಆರೋಗ್ಯದ ಕ್ಷೇತ್ರಗಳಲ್ಲಿ ಹೊಸ ಉತ್ತೇಜನ ಕೊಟ್ಟಿದ್ದು, ಮುಂಬರುವ ದಿನಗಳಲ್ಲಿ ನಿಧಿ ಕ್ರೋಢೀಕರಣದ ಚಟುವಟಿಕೆ ಇನ್ನಷ್ಟು ಭರದಿಂದ ಸಾಗಲಿದೆ,” ಎಂದ ದಾಸ್ “ಸಾಂಕ್ರಾಮಿಕದಿಂದ ಜಾಗತಿಕ ಸಮುದಾಯದ ಚೇತರಿಕೆಯು ದೇಶದಿಂದ ದೇಶಕ್ಕೆ, ಕ್ಷೇತ್ರದಿಂದ ಕ್ಷೇತ್ರಕ್ಕೆ ಬೇರೆಯ ಮಟ್ಟದಲ್ಲಿದೆ. ಚುರುಕು ಗತಿಯಲ್ಲಿ ಲಸಿಕೆ ಕಾರ್ಯಕ್ರಮ ಹಾಗೂ ನೀತಿಗಳ ಬೆಂಬಲದಿಂದಾಗಿ ಅಭಿವೃದ್ಧಿ ಹೊಂದಿದ ಆರ್ಥಿಕ ಶಕ್ತಿಗಳು ಸಹಜತೆಗೆ ಬೇಗನೇ ಮರಳಿವೆ” ಎಂದಿದ್ದಾರೆ.
ಇದೇ ವೇಳೆ, ಲಸಿಕೆಗಳ ಕೊರತೆ ಹಾಗೂ ಪ್ರಬಲ ನೀತಿಗಳ ಕೊರತೆಯಿಂದಾಗಿ ಅಭಿವೃದ್ಧಿಶೀಲ ಆರ್ಥಿಕತೆಗಳು ಈ ವಿಚಾರದಲ್ಲಿ ಹಿಂದೆ ಉಳಿದಿವೆ ಎಂದು ದಾಸ್ ತಿಳಿಸಿದ್ದಾರೆ.