ಶ್ರೀನಗರ: ಶ್ರೀನಗರದಿಂದ ಜಮ್ಮುವಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹಾರಾಟವು ಇಲಿಯೊಂದರ ಕಾಟದಿಂದ ಒಂದು ತಾಸು ವಿಳಂಬವಾಗಿದೆ.
ಶ್ರೀನಗರದ ಶೇಖ್ ಉಲ್-ಅಲಂ ನಿಲ್ದಾಣದಿಂದ ಈ ವಿಮಾನ ಮಧ್ಯಾಹ್ನ 2.15ಕ್ಕೆ ನಿರ್ಗಮಿಸಬೇಕಿತ್ತು. ಇಲಿ ಕಾಟದಿಂದ ಮುಕ್ತವಾಗಿ ಹಾರಾಟ ಆರಂಭಿಸುವ ಹೊತ್ತಿಗೆ 3.20 ಆಗಿತ್ತು. ಈ ಕುರಿತು ತನಿಖೆ ನಡೆಸುವಂತೆ ಡಿಜಿಸಿಎ ಆದೇಶಿಸಿದೆ.
ಟಾಟಾ ಮಾಲೀಕತ್ವದ ಏರ್ ಇಂಡಿಯಾ ವಿಮಾನದ ಹಾರಾಟವು ಗುರುವಾರ ಮಧ್ಯಾಹ್ನದ ಬಳಿಕ ಒಂದು ತಾಸು ವಿಳಂಬವಾಗಿತ್ತು. ಅಧಿಕಾರಿಗಳ ಹೇಳಿಕೆಯಂತೆ, ಶ್ರೀನಗರ-ಜಮ್ಮು ಏರ್ ಇಂಡಿಯಾ ಎಐ-822 ವಿಮಾನವು ಶ್ರೀನಗರ ಏರ್ಪೋರ್ಟ್ನಿಂದ ಹಾರಾಟ ಆರಂಭಿಸುವ ಪೂರ್ವದಲ್ಲಿ ಮೂಷಿಕ ದರ್ಶನವಾಗಿ ಈ ವಿಳಂಬ ಉಂಟಾಗಿದೆ.
ಇದೇ ಮೊದಲಲ್ಲ:
ಏರ್ ಇಂಡಿಯಾ ವಿಮಾನದಲ್ಲಿ ಇಲಿ ಕಾಟ ಇದೇ ಮೊದಲೇನಲ್ಲ. ಕಳೆದ ವರ್ಷ ದೆಹಲಿ-ನೆವಾರ್ಕ್ ಅಂತಾರಾಷ್ಟ್ರೀಯ ವಿಮಾನದಲ್ಲಿ ಹಾರಾಟದ ನಡುವೆ ಒಂದು ಬಾವಲಿ ಕಂಡಿತ್ತು. ಹೀಗಾಗಿ, ಪೈಲಟ್ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ವಾಪಸ್ ತರಲು ನಿರ್ಧರಿಸಿದರು. ವನ್ಯಜೀವಿ ಅಧಿಕಾರಿಗಳು ಧಾವಿಸಿ ಬಂದು, ಬಾವಲಿಯ ಕಳೇಬರವನ್ನು ಹೊರತೆಗೆದಿದ್ದರು.