ಬೆಂಗಳೂರು: ಪತ್ನಿ ಸುಂದರವಾಗಿ ಕಾಣಬಾರದು ಎಂಬ ಕಾರಣಕ್ಕೆ ಪತಿಯೇ ತಲೆ ಕೂದಲು ಕತ್ತರಿಸಿ ಚಿತ್ರಹಿಂಸೆ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೈಕೋರ್ಟ್ ವಕೀಲನಾಗಿರುವ ವ್ಯಕ್ತಿ ಪತ್ನಿ ಹಾಗೂ ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದು, ಮಹಿಳೆ ವನಿತಾ ಸಹಾಯವಾಣಿ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
8 ವರ್ಷಗಳ ಹಿಂದೆ ಮದುವೆಯಾದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಪತಿರಾಯ ನಂತರ ಪತ್ನಿಗೆ ಕಿರುಕುಳ ನೀಡಿದ್ದಾನೆ. ಆರ್ಥಿಕವಾಗಿ ಹಿಂದುಳಿದಿದ್ದ ಮಹಿಳೆಯ ಪೋಷಕರು ಗಂಡನೊಂದಿಗೆ ಅನುಸರಿಸಿಕೊಂಡು ಹೋಗುವಂತೆ ಬುದ್ಧಿವಾದ ಹೇಳಿದ್ದು, ಮಹಿಳೆ ಪತಿಯ ಹಿಂಸೆಯನ್ನು ಸಹಿಸಿಕೊಂಡಿದ್ದಾರೆ. ಇತ್ತೀಚೆಗೆ ಪತಿಯಿಂದ ಕಿರುಕುಳ ಹೆಚ್ಚಾಗಿದೆ. ಸುಂದರವಾಗಿ ಕಾಣಬಾರದು ತಲೆ ಕೂದಲು ಕತ್ತರಿಸಿಕೊಳ್ಳಬೇಕು ಎಂದು ಹೇಳಿದ ಪತಿ ತಾನೇ ಕತ್ತರಿಯಿಂದ ಪತ್ನಿಯ ಕೂದಲು ಕತ್ತರಿಸಿದ್ದಾನೆ. ಬಳಿಕ ತಲೆಯನ್ನು ಬೋಳಿಸಿಕೊಳ್ಳುವಂತೆ ಪತ್ನಿಯನ್ನು ಬೆದರಿಸಿದ್ದು ಇದಕ್ಕೆ ಒಪ್ಪದಿದ್ದಾಗ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ.
ಮಕ್ಕಳೊಂದಿಗೆ ಮನೆಯಿಂದ ಹೊರಬಿದ್ದ ಮಹಿಳೆ ವಿದ್ಯಾರಣ್ಯಪುರದ ಸ್ವಾಧಾರ್ ಗೃಹದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಪತಿ ತನ್ನ ಪ್ರಭಾವ ಬಳಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ನಿ ವಿರುದ್ಧವೇ ದೂರು ನೀಡಿದ್ದು, ಸ್ವಾಧಾರ್ ಕೇಂದ್ರದ ಸಿಬ್ಬಂದಿ ವಿಚಾರಣೆಗೆ ಹಾಜರಾಗಲು ಪತಿಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.