ಬೆಂಗಳೂರು: ಅನೇಕ ಕ್ವಾರಂಟೈನ್ ಸೆಂಟರ್ ಅವ್ಯವಸ್ಥೆಯ ಆಗರವಾಗಿವೆ ಎಂಬ ದೂರು ಕೇಳಿ ಬಂದಿದೆ. ಬೆಂಗಳೂರಿನ ಹೋಟೆಲ್ ವೊಂದನ್ನು ಕ್ವಾರಂಟೈನ್ ಸೆಂಟರ್ ಮಾಡಲಾಗಿದ್ದು ಅದು ಅವ್ಯವಸ್ಥೆಯ ಆಗರವಾಗಿದೆ.
ಎಲ್ಲೆಂದರಲ್ಲಿ ಕಾಂಡೋಮ್ ಗಳ ರಾಶಿ ಬಿದ್ದಿದೆ. ಸೊಳ್ಳೆ ಕಾಟ ವಿಪರೀತವಾಗಿದ್ದು ಶೌಚ ಗೃಹಕ್ಕೆ ನೀರಿಲ್ಲ. ಸ್ನಾನ ಮಾಡಲು ಕೂಡ ನೀರು ಇಲ್ಲದಂತಹ ಪರಿಸ್ಥಿತಿ ಇದೆ. ಧೂಳು ಹಿಡಿದ ಹಾಸಿಗೆಗಳು, ಟಿವಿ ಇದ್ದರೂ ಕೇಬಲ್ ಇಲ್ಲವಾಗಿದೆ. ಕರೆಂಟ್ ಇದ್ದು ಇಲ್ಲದಂತಾಗಿದೆ. ಹೆಚ್ಚಿನ ಹಣ ಕೊಟ್ಟರೂ ಕೂಡ ಸೂಕ್ತವಾದ ಸೌಲಭ್ಯ ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಕ್ವಾರಂಟೈನ್ ಸೆಂಟರ್ ನಲ್ಲಿರುವ ಅವ್ಯವಸ್ಥೆಯ ಬಗ್ಗೆ ಯುವಕನೊಬ್ಬ ಹೇಳಿಕೊಂಡಿದ್ದಾನೆ. ಕ್ವಾರಂಟೈನ್ ಹೆಸರಲ್ಲಿ ಹಣ ದೋಚಲಾಗುತ್ತಿದೆಯೇ ಎನ್ನುವ ಆರೋಪ ಕೇಳಿ ಬಂದಿದೆ. ಮೇ 26 ರಂದು ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿದ ಯುವಕನನ್ನು ಬೇಡವೆಂದರೂ ಕೇಳದೆ ದುಬಾರಿ ಬೆಲೆಯ ಹೋಟೆಲ್ ಗೆ ಕ್ವಾರಂಟೈನ್ ಗೆ ಕರೆದುಕೊಂಡು ಹೋಗಲಾಗಿದೆ.
ಕಡಿಮೆ ಬೆಲೆಯ ಹೋಟೆಲ್ ಗಳಿಗೆ ಕರೆದುಕೊಂಡು ಹೋಗುವಂತೆ ಹೇಳಿದರೂ ದುಬಾರಿ ಬೆಲೆಯ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದು ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಲಾಗಿದೆ. ಆದರೂ, ಅಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಎನ್ನುವ ಯುವಕ ಸೆಲ್ಫಿ ವಿಡಿಯೋ ಮೂಲಕ ಅವ್ಯವಸ್ಥೆ ಹೇಳಿದ್ದಾನೆನ್ನಲಾಗಿದೆ.
7 ದಿನದ ಕ್ವಾರಂಟೈನ್ ಗೆ ಮುಂಗಡ ಹಣ ಪಡೆದುಕೊಳ್ಳಲಾಗಿದೆ. ಆದರೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಅವ್ಯವಸ್ಥೆಯ ಆಗರವಾಗಿದ್ದು, ಎಲ್ಲೆಂದರಲ್ಲಿ ಕಾಂಡೋಮ್ ಗಳು ಕಸದ ರಾಶಿ ಬಿದ್ದಿದೆ ಎಂದು ಯುವಕ ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾನೆನ್ನಲಾಗಿದೆ.