ಬೆಂಗಳೂರು: ಲಾಕ್ಡೌನ್ ಜಾರಿಯಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕ ಮಹಿಳೆಗೆ ಗಾರೆ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಲಾಗಿದೆ.
ಜಾರ್ಖಂಡ್ ಮೂಲದ 27 ವರ್ಷದ ಮಹಿಳೆಗೆ ಕಿರುಕುಳ ನೀಡಿದ ಕೆಂಗೇರಿ ಉಪನಗರದ ನಿವಾಸಿ ಅಜ್ಗರ್ ಅಲಿ ಮುಸ್ತಾಫ್ ಎಂಬುವನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 9 ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಮಹಿಳೆ ಅಗರಬತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಜಾರಿಯಾಗಿದ್ದರಿಂದ ಕೆಲಸ ಇಲ್ಲದೆ ತೊಂದರೆಯಾಗಿದೆ. ಕಳೆದ ತಿಂಗಳು ಚಳ್ಳಗಟ್ಟದಲ್ಲಿ ಪರಿಚಯವಾಗಿದ್ದ ಗುತ್ತಿಗೆದಾರ ಮುಸ್ತಾಫ್ ಗಾರೆ ಕೆಲಸ ಕೊಡಿಸುವುದಾಗಿ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾನೆ.
10 ದಿನಗಳಿಂದ ಮಹಿಳೆ ಇದ್ದ ಕೊಠಡಿಗೆ ಬಂದು ಹಣ ಕೊಡುತ್ತೇನೆ ಸಹಕರಿಸಿ ಎಂದು ಅಸಭ್ಯವಾಗಿ ವರ್ತಿಸಿದ್ದಾನೆ. ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಿ ಹೆಸರು ನೋಂದಾಯಿಸಲು ಕುಂಬಳಗೋಡು ಠಾಣೆಗೆ ಹೋದ ಮಹಿಳೆಗೆ ಅಲ್ಲಿಗೆ ಬಂದಿದ್ದ ಜಾರ್ಖಂಡ್ ಮೂಲದ ಯುವಕರ ಪರಿಚಯವಾಗಿದ್ದು, ಈ ವೇಳೆ ಗುತ್ತಿಗೆದಾರನ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ.
ಯುವಕರು ಟ್ವಿಟರ್ನಲ್ಲಿ ಜಾರ್ಖಂಡ್ ಡಿಜಿಪಿ ಗಮನಕ್ಕೆ ವಿಷಯ ತಂದಿದ್ದು ಜಾರ್ಖಂಡ್ ಪೊಲೀಸರು ಬೆಂಗಳೂರು ನಗರ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಟ್ವಿಟರ್ನಲ್ಲಿ ಬಂದ ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.