ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂಬುದು ಪ್ರತಿ ವರ್ಷವೂ ಒಂದು ಪ್ರಹಸನದಂತಾಗಿದೆ. ಏನಾದರೊಂದು ಕಾರಣಕ್ಕೆ ವರ್ಗಾವಣೆ ಪ್ರಕ್ರಿಯೆ ಪದೇ ಪದೇ ಮುಂದೂಡಿಕೆಯಾಗುತ್ತಿದ್ದು, ಇದರಿಂದ ಶಿಕ್ಷಕ ಸಮುದಾಯ ನಿರಾಸೆಗೊಂಡಿದೆ.
ಹೀಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಕರ ವರ್ಗಾವಣೆ ಕುರಿತಂತೆ ನಿಯಮಾವಳಿಯನ್ನು ರೂಪಿಸಲಾಗುತ್ತಿದ್ದು, ಅದರನ್ವಯ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದರು.
ಹೀಗಾಗಿ ಶಿಕ್ಷಕರು ಸಮಾಧಾನ ನಿಟ್ಟುಸಿರು ಬಿಟ್ಟಿದ್ದು, ಆದರೆ ಈ ಬಾರಿ ವರ್ಗಾವಣೆ ಪ್ರಕ್ರಿಯೆ ನಡೆಯಲು ಈಗ ಕೊರೊನಾ ಅಡ್ಡಿಯಾಗಿದೆ. ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ಮತ್ತು ಕಡ್ಡಾಯ ವರ್ಗಾವಣೆ ಹೊಂದಿದ ಶಿಕ್ಷಕರು ಮುಂದಿನ ಆದೇಶದವರೆಗೂ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲೇ ಸೇವೆ ಮುಂದುವರಿಸಲು ಸೂಚಿಸಲಾಗಿದೆ.
ಇದರಿಂದಾಗಿ ಈ ಬಾರಿಯ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಶಿಕ್ಷಕ ಸಮುದಾಯವಿದೆ.